ವಿರಾಜಪೇಟೆ: ಪಟ್ಟಣದ ತೆಲುಗರ ಬೀದಿಯಲ್ಲಿನ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ನಿಂದ ಏ.2 ರಿಂದ ಏ.4 ರವರೆಗೆ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಟಿ.ಪಿ ಕೃಷ್ಣ ತಿಳಿಸಿದರು.
‘500ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಮಹಾಕುಂಭಾಭಿಷೇಕ ಪೂಜೆ ಈ ವರ್ಷ ನಡೆಯಲಿದೆ. ಈ ಪೂಜಾ ಕೈಂಕರ್ಯಗಳನ್ನು ತಮಿಳುನಾಡಿನ 17 ಪುರೋಹಿತ ತಂತ್ರಿಗಳು ನಡೆಸಿ ಕೊಡಲಿದ್ದಾರೆ. ಆರಂಭದಲ್ಲಿ ತಲಕಾವೇರಿಯಿಂದ ತೀರ್ಥವನ್ನು ತಂದು ಅಂಗಾಳ ಪರಮೇಶ್ವರಿ ದೇವರಿಗೆ ಹಾಗೂ ಕುಂಭನಿಗೆ ಅಭಿಷೇಕ ಮಾಡಿ ನಂತರ ವಿವಿಧ ಪೂಜೆಗಳನ್ನು ನಡೆಸಲಾಗುವುದು. ಈ ಬಾರಿ ರಾಜ್ಯದಲ್ಲಿಯೇ ಬರಗಾಲ ಆವರಿಸಿಕೊಂಡಿರುವುದರಿಂದ ಉತ್ತಮ ಮಳೆ- ಬೆಳೆಯಾಗಿ ದೇಶ ಸುಭೀಕ್ಷೆಯಾಗಲು ವರುಣ ಪೂಜೆಯನ್ನು ನಡೆಸಲಾಗುವುದು’ ಎಂದು ಅವರು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ದೇವಾಲಯದಲ್ಲಿ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ (ಏ.4 ರಂದು) ಬೆಳಿಗ್ಗೆ 10.30ಕ್ಕೆ ಗೋಪುರ ಕಲಶ ಕುಂಭಾಭಿಷೇಕ, ಗಣಪತಿ, ಸುಬ್ರಹ್ಮಣ್ಯ, ಕರುಪ್ಪಸ್ವಾಮಿ, ಅಂಗಾಳ ಪರಮೇಶ್ವರಿ ದೇವಿಗೆ ಕುಂಭಾಭಿಷೇಕ ನಡೆದು ಬಳಿಕ ಗೋಪೂಜೆ ನಡೆಯಲಿದೆ’ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಟಿ.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಎನ್. ರಂಜನ್, ಟಿ.ಪಿ. ವೇಣುಗೋಪಾಲ್, ಟಿ.ಪಿ. ಗುರುನಾಥ್, ಟಿ.ಆರ್. ಜನಾರ್ಧನ್, ಟಿ.ಡಿ. ಹರೀಶ್ ಹಾಗೂ ಟಿ.ಸಿ. ನಿಶಾಂಕ್ ಉಪಸ್ಥಿತರಿದ್ದರು.