ಮಡಿಕೇರಿ: ಶಾಸಕರ ಸಮಸ್ಯೆಗಳಿಗೆ ಸಚಿವರು ಸ್ಪಂದಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಇಲ್ಲಿ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಶಾಸಕರು ಸಚಿವರ ವಿರುದ್ಧ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ನನಗೇನೂ ಗೊತ್ತಿಲ್ಲ. ಆದರೆ, ಶಾಸಕರ ಸಮಸ್ಯೆಗಳಿಗೆ ಸಚಿವರು ಸ್ಪಂದಿಸಬೇಕು ಎಂಬ ಮಾತನ್ನು ಹೇಳುತ್ತೇನೆ’ ಎಂದರು.
ಜಿಯೊಲಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್ಐ)ದವರು ಈಗಾಗಲೆ ಕೊಡಗಿನಲ್ಲಿ ಎಲ್ಲೆಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಸ್ಥಳಗಳ ಪಟ್ಟಿ ಕೊಟ್ಟಿದ್ದಾರೆ. ಇಲ್ಲಿ ಭೂಕುಸಿತ ಸಂಭವಿಸದಂತೆ ತಡೆಯಲು ₹ 15ರಿಂದ ₹ 20 ಕೋಟಿ ಹಣ ನೀಡಲು ಸಿದ್ಧರಿದ್ದೇವೆ. ಈ ಕುರಿತು ಬೇಗನೇ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
‘ಕೊಡಗು ಜಿಲ್ಲಾಧಿಕಾರಿ ಖಾತೆಯಲ್ಲಿ ₹ 56 ಕೋಟಿ ಹಣ ಇದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹ 540 ಕೋಟಿ ಹಣ ಇದೆ. ಇನ್ನಷ್ಟು ಹಣ ನೀಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.
ಪ್ರಾಕೃತಿಕ ವಿಕೋಪದಡಿ ಈ ಹಿಂದಿನ ವರ್ಷಗಳಲ್ಲಿ ನೀಡಿರುವ ಅನುದಾನ ಬಳಕೆಯಾಗದೇ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ಒಂದು ತಿಂಗಳ ಒಳಗೆ ಕೆಲಸ ಆಗಿರುವುದಕ್ಕೆ ಪರಿಶೀಲಿಸಿ ಬಿಲ್ ಪಾವತಿಸಬೇಕು. ಒಂದು ವೇಳೆ ಕಾಮಗಾರಿ ಆಗಿರದಿದ್ದರೆ ಆ ಹಣವನ್ನು ಈ ವರ್ಷದ ಪ್ರಾಕೃತಿಕ ವಿಕೋಪದಡಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.