ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರವಾಗಿ ಬಾಳೆ, ಕಾಫಿ, ತೆಂಗು, ಅಡಿಕೆ ಬೆಳೆಗಳನ್ನು ನಾಶಗೊಳಿಸುತ್ತಿದ್ದು, ಕಾಡಾನೆಗಳನ್ನು ಇಲ್ಲಿಂದ ಸ್ಥಳಾಂತರಿಸುವ ಮೂಲಕ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಡಾನೆಗಳು ಗುರುವಾರ ರಾತ್ರಿ ಚೋಕಿರ ಉತ್ತಪ್ಪ, ಗಣಪತಿ, ಚಂಗಪ್ಪ, ತೋಲಂಡ ಅಯ್ಯಪ್ಪ, ಎಡಿಕೇರಿ ಗಣಪತಿ ಅವರ ತೋಟಕ್ಕೆ ದಾಳಿ ಮಾಡಿ ನಾಶಗೊಳಿಸಿವೆ. ಸ್ಥಳಕ್ಕೆ ಅರಣ್ಯ ರಕ್ಷಕರಾದ ಕಾಳೇಗೌಡ ಮತ್ತು ಸಿಬ್ಬಂದಿ ಆಗಮಿಸಿ ಪರಿಹಾರದ ಭರವಸೆ ನೀಡಿದ್ದಾರೆ.
ಕಾಡಾನೆ ಹಾವಳಿ ತಡೆಗೆ ಒತ್ತಾಯ ಸುಂಟಿಕೊಪ್ಪ: ರಾತ್ರಿ ವೇಳೆ ಒಂಟಿ ಸಲಗ ತೋಟಕ್ಕೆ ಲಗ್ಗೆಯಿಟ್ಟು ಬಾಳೆ ಗಿಡ, ತೆಂಗಿನ ಸಸಿ, ಮರಗೆಣಸನ್ನು ತಿಂದು ನಾಶಪಡಿಸಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಐಗೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುರುವಾರ ರಾತ್ರಿ ಕಾಡಾನೆಯೊಂದು ಗ್ರಾಮದ ಪಿ.ಕೆ.ಸೋಮಯ್ಯ, ಎಂ.ಸಿ.ಸಂಜಯ್, ಅಪ್ಪಣಿ, ಹರಪಳ್ಳಿತೋಟ, ಜಿ.ಕೆ.ಬಾಲಕೃಷ್ಣ ಅವರ ಜಮೀನಿಗೆ ನುಗ್ಗಿ ಬಾಳೆ ಗಿಡ, ತೆಂಗಿನ ಸಸಿ, ಮರಗೆಣಸನ್ನು ಬೇಕಾಬಿಟ್ಟಿ ತಿಂದು, ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸಿದೆ.
‘ಐಗೂರು ಯಡವಾರೆ, ಕಾಜೂರು, ಯಡವನಾಡು ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಹಿಂಡು ಹಿಂಡಾಗಿ ಲಗ್ಗೆಯಿಡುತ್ತಿವೆ. ಅರಣ್ಯ ಇಲಾಖೆಯವರು ಆನೆಯನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.