ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ದೇಗುಲದಲ್ಲಿ ರಥೋತ್ಸವ ಸಂಭ್ರಮ

ಶ್ರದ್ಧಾಭಕ್ತಿಯಿಂದ ಜರುಗಿದ ದೇವಾಲಯದ ವಾರ್ಷಿಕೋತ್ಸವ
Published 8 ಮೇ 2024, 4:36 IST
Last Updated 8 ಮೇ 2024, 4:36 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಕರ್ಣಂಗೇರಿ ಕ್ಷೇತ್ರದ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆದ ರಥೋತ್ಸವದಲ್ಲಿ ಹಲವಾರು ಮಂದಿ ಭಾಗಿಯಾದರು. ವ್ರತ ಪಾಲಿಸಿದ್ದ ಭಕ್ತರು ರಥವನ್ನು ಎಳೆದರು.

ಬೆಳಿಗ್ಗೆಯೇ ಇಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿದ್ದಂತೆ ಭಕ್ತರೂ ಸೇರತೊಡಗಿದರು. ಧ್ವಜಾರೋಹಣದ ನಂತರ ಗಣಪತಿ ಹೋಮ ಆರಂಭವಾಗುತ್ತಿದ್ದಂತೆ ಭಕ್ತರ ಸಂದಣಿ ಹೆಚ್ಚಾಯಿತು. ನಂತರ ದೇವರ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ತೀರ್ಥಸ್ನಾನಗಳು ನಡೆದವು.

ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿ ಬಳಿಕ ದೇವಾಲಯದ ಆವರಣದ ಸುತ್ತಲೂ ದೇವಿಯ ರಥೋತ್ಸವ ಆರಂಭವಾದಾಗ ದೇಗುಲದ ಆವರಣ ಭಕ್ತರಿಂದ ತುಂಬಿ ಹೋಗಿತ್ತು. ನೂರಾರು ಭಕ್ತರು ಕೈಮುಗಿಯುತ್ತ ರಥದ ಹಿಂದೆ ಹಾಗೂ ಇಕ್ಕೆಲಗಳಲ್ಲಿ ಹೆಜ್ಜೆ ಹಾಕಿದರು.

ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ, ಮಂಗಳಾರತಿ, ಅನ್ನದಾನ ಮೊದಲಾದ ಧಾರ್ಮಿಕ ಕೈಂಕರ್ಯಗಳಲ್ಲೂ ನೂರಾರು ಭಕ್ತರು ಸೇರಿದ್ದರು.

ಸಂಜೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ, ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯಕ್ಕೆ ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಡಿಕೇರಿ ಮಾತ್ರವಲ್ಲ, ಕೊಡಗು, ಮೈಸೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹೆಚ್ಚಿನ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.

ಮಡಿಕೇರಿಯ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿ ಮಂಗಳವಾರ ನಡೆದ ರಥೋತ್ಸವದಲ್ಲಿ ಹಲವು ಭಕ್ತರು ಭಾಗಿಯಾದರು
ಮಡಿಕೇರಿಯ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿ ಮಂಗಳವಾರ ನಡೆದ ರಥೋತ್ಸವದಲ್ಲಿ ಹಲವು ಭಕ್ತರು ಭಾಗಿಯಾದರು
ಮಡಿಕೇರಿಯ ಕರ್ಣಂಗೇರಿಯಲ್ಲಿರುವ ರಾಜರಾಜೇಶ್ವರಿ ದೇಗಲದ ಆವರಣದಲ್ಲಿರುವ ಶಿವನ ಬೃಹತ್ ವಿಗ್ರಹ
ಮಡಿಕೇರಿಯ ಕರ್ಣಂಗೇರಿಯಲ್ಲಿರುವ ರಾಜರಾಜೇಶ್ವರಿ ದೇಗಲದ ಆವರಣದಲ್ಲಿರುವ ಶಿವನ ಬೃಹತ್ ವಿಗ್ರಹ

Highlights - ಬೆಳಿಗ್ಗೆಯಿಂದಲೇ ಆರಂಭವಾಗಿದ್ದ ವಿವಿಧ ಪೂಜಾ ಕೈಂಕರ್ಯಗಳು ರಥ ಎಳೆದ ವ್ರತ ಪಾಲಿಸಿದ್ದ ಭಕ್ತರು ಅಕ್ಕಪಕ್ಕದ ಜಿಲ್ಲೆಗಳಿಂದಲೂ ಭಕ್ತರ ಆಗಮನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT