ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಭಾಗವಹಿಸಿದ್ದ ಶಿಕ್ಷಕರು ಪೋಷಕರು
ಇಡೀ ದಿನ ನಡೆದ ವಿವಿಧ ಸ್ಪರ್ಧೆಗಳು ನೂರಾರು ವಿದ್ಯಾರ್ಥಿಗಳು ಭಾಗಿ ವಿದ್ಯಾರ್ಥಿಗಳ ಪ್ರತಿಭೆಗೆ ಚಪ್ಪಾಳೆ ತಟ್ಟಿದ ಶಿಕ್ಷಕರು
ಸೃಜನಶೀಲತೆ ಕ್ರಿಯಾಶೀಲತೆ ಬೆಳೆಸಿಕೊಳ್ಳಲು ಐಶ್ವರ್ಯ ಕರೆ
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆ ಸಾಹಿತ್ಯ ಸಂಗೀತ ನೃತ್ಯ ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು. ಆಟೋಟವು ಸಹ ಇರಬೇಕು. ಆದರೆ ಮೊಬೈಲ್ ಫೋನ್ ನೋಡುವ ಗೀಳು ಇರಬಾರದು ಎಂದು ಸಲಹೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ ‘ಪ್ರತಿಯೊಬ್ಬರ ಬದುಕಿನಲ್ಲಿ ಸಂತಸ ನೆಮ್ಮದಿ ಇರಲು ಓದಿನ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾಣಿ ಪಕ್ಷಿ ಗಿಡ ಮರ ಹಸಿರು ನೋಡಿದರೆ ಒಂದು ರೀತಿ ಉಲ್ಲಾಸ ಉಂಟಾಗುತ್ತದೆ. ಇದರಿಂದ ಸಕಾರಾತ್ಮಕವಾಗಿ ಯೋಚಿಸಲು ಸಹಕಾರಿಯಾಗಲಿದೆ’ ಎಂದರು. ಸಂತ ಮೈಕಲರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾದರ್ ಸಂಜಯ್ ಕುಮಾರ್ ಮಾತನಾಡಿ ‘ಪ್ರತಿಯೊಬ್ಬರಲ್ಲಿಯೂ ಹುಟ್ಟುವಾಗ ಉಸಿರು ಇರುತ್ತದೆ ಸಾಯುವಾಗ ಹೆಸರು ಇರುತ್ತದೆ. ಆದ್ದರಿಂದ ಉಸಿರು ಮತ್ತು ಹೆಸರಿನ ನಡುವೆ ಕೆಸರು ಎರಚದೆ ಸಮಾಜದಲ್ಲಿ ಉತ್ತಮ ಬದುಕು ನಡೆಸುವತ್ತ ಚಿಂತಿಸಬೇಕು’ ಎಂದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಮಾತನಾಡಿ ‘ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಆದ್ದರಿಂದ ನಿರಂತರ ಸ್ಪರ್ಧೆಯಿಂದ ಒಂದಲ್ಲ ಒಂದು ದಿನ ಯಶಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.