ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಸಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ

ಮಡಿಕೇರಿಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಸುಧಾರಣೆಗೆ ಮುಂದಾದ ಜಿಲ್ಲಾಡಳಿತ
Last Updated 20 ಮೇ 2021, 14:24 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯನ್ನು ಮತ್ತಷ್ಟು ಸುಧಾರಣೆ ಮಾಡುವಲ್ಲಿ ಉಪ ವಿಭಾಗಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ (ಟಾಸ್ಕ್ ಫೋರ್ಸ್) ಸಮಿತಿ ರಚನೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. ಉಪ ವಿಭಾಗಾಧಿಕಾರಿ ಅವರು ಅಧ್ಯಕ್ಷರಾಗಿ, ತಾಂತ್ರಿಕ ವಿಭಾಗದಿಂದ ಡಾ.ನವೀನ್ ಕುಮಾರ್, ಆಡಳಿತ ವಿಭಾಗದಿಂದ ಡಾ.ನಂಜುಂಡೇಗೌಡ ಸದಸ್ಯರನ್ನಾಗಿ ನೇಮಿಸಲು ತೀರ್ಮಾನಿಸಲಾಯಿತು.

ನವೀನ್ ಕುಮಾರ್ ಅವರು ಮಾತನಾಡಿ, ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಪ್ರತಿ ದಿನದ 24 ಗಂಟೆಯಲ್ಲಿ ಎಷ್ಟು ಮಂದಿ ಸೋಂಕಿತರು ದಾಖಲಾಗಿದ್ದಾರೆ. ಎಷ್ಟು ಮಂದಿ ಮರಣ ಹೊಂದಿದ್ದಾರೆ. ಮರಣಕ್ಕೆ ಕಾರಣವೇನು? ಸೋಂಕಿತರು ದಾಖಲಾಗುವ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿದ್ದರು? ಸಾಮಾನ್ಯ ವಾರ್ಡ್‍ನಲ್ಲಿ ಎಷ್ಟು ಮಂದಿ ಇದ್ದಾರೆ? ಐಸಿಯು ವಾರ್ಡ್‍ನಲ್ಲಿ ಎಷ್ಟು ಮಂದಿ ಇದ್ದಾರೆ? ಹೀಗೆ ಹಲವು ವಿಚಾರಗಳ ಕುರಿತು ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡಲಾಗುತ್ತದೆ ಎಂದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಎಷ್ಟು ಮಂದಿ ತಜ್ಞ ವೈದ್ಯರು, ಸಾಮಾನ್ಯ ವೈದ್ಯರು, ಶುಶ್ರೂಷಕರು, ‘ಡಿ’ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕೋವಿಡ್ 19 ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಂಡ ನಂತರ ಸೊಂಕಿತರ ಸ್ಥಿತಿಗತಿ ಬಗ್ಗೆ ತಪಾಸಣೆ ಮಾಡಬೇಕು. ವಿಳಂಬ ಮಾಡದೇ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಡಾ.ನವೀನ್ ಅವರು ಸಲಹೆ ಮಾಡಿದರು.

ಸೋಂಕಿತರ ಆರೋಗ್ಯ ಸುಧಾರಣೆ ಬಗ್ಗೆ ಸದಾ ಗಮನ ಹರಿಸಬೇಕು. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ನವೀನ್ ಅವರು ಹೇಳಿದರು.

ಕೋವಿಡ್ ನಿರ್ವಹಣೆ ಸಂಬಂಧ ಕಳೆದ ಬಾರಿ ಯಾವ ರೀತಿ ಇತ್ತು; ಈ ಬಾರಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಕೋವಿಡ್ 19 ಸೋಂಕಿನಿಂದ ದಾಖಲಾಗುವವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಔಷಧೋಪಚಾರ ನೀಡಬೇಕು. ಒಳ್ಳೆಯ ವಾತಾವರಣ ಕೋವಿಡ್ ಆಸ್ಪತ್ರೆಯಲ್ಲಿ ಇರಬೇಕು ಎಂದು ಸೂಚಿಸಿದರು.

ಕೋವಿಡ್ ಸೋಂಕಿತರನ್ನು ಸರಿಯಾಗಿ ಉಪಚರಿಸಬೇಕು. ಯಾವುದೇ ರೀತಿಯ ದೂರು ಬರದಂತೆ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.

ಕೋವಿಡ್ –19 ನಿರ್ವಹಣೆ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ಡಾ.ಅಜೀಜ್ ಅವರು ಮಾತನಾಡಿ, ಶುಶ್ರೂಷಕರು ಹಾಗೂ ‘ಡಿ’ ದರ್ಜೆ ನೌಕರರ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ರೂಪೇಶ್ ಗೋಪಾಲ್, ಡಾ.ಮಂಜುನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT