ಕುಶಾಲನಗರ: ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಳಿಯಿಂದ ಮನೆಗೆ ಹಾನಿಯಾಗಿದೆ.
ಗ್ರಾಮದ ರಾಧಾ ರಮೇಶ್ ಎಂಬುವರ ಮನೆ ಆವರಣಕ್ಕೆ ರಾತ್ರಿ ಕಾಡಾನೆ ನುಗ್ಗಿದೆ. ಇದರಿಂದ ಭಯಭೀತರಾದ ಮನೆ ಮಂದಿ ಜೋರಾಗಿ ಕೂಗಿದ್ದಾರೆ. ಜೊತೆಗೆ ಮನೆ ಮುಂದಿನ ಲೈಟ್ ಹಾಕಿದ್ದಾರೆ. ಇದರಿಂದ ಕಾಡಾನೆ ಏಕಾಏಕಿ ಮನೆ ಮುಂದೆ ನುಗ್ಗಿ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟು ಜಖಂಗೊಳಿಸಿದೆ.
ಕಾಡಾನೆ ದಾಳಿ ವಿಚಾರ ತಿಳಿದು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ತಾಲ್ಲೂಕಿನ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಕೃಷಿಕರಾದ ಪ್ರವೀಣ್, ವರದರಾಜೇ ಅರಸು, ರಮೇಶ್, ಲವ ಒತ್ತಾಯಿಸಿದರು.