ಕೋಲಾರ: ‘ಅದಾನಿ ವಿಚಾರದಲ್ಲಿ ನನಗೆ ಉತ್ತರ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ನನ್ನನ್ನು ಜೈಲಿಗೆ ಹಾಕಲಿ, ಅನರ್ಹಗೊಳಿಸಲಿ, ಮನೆ ಖಾಲಿ ಮಾಡಿಸಲಿ. ಏನೇ ಮಾಡಿದರೂ ನನ್ನ ಹೋರಾಟ ನಿಲ್ಲುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ರಾಹುಲ್ ಗಾಂಧಿ ಗುಡುಗಿದರು.
ನಗರದ ಹೊರವಲಯದ ಟಮಕದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಜೈ ಭಾರತ್’ ಸಮಾವೇಶದಲ್ಲಿ ಅವರು ಪ್ರಧಾನಿ ಮೋದಿ, ಉದ್ಯಮಿ ಅದಾನಿ ವಿರುದ್ಧ ಪದೇಪದೇ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ಮೇಲಿನ ಶೇ 40 ಕಮಿಷನ್ ಆರೋಪ ಪ್ರಸ್ತಾಪಿಸುತ್ತಲೇ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದರು.
‘ಜನರಿಂದ ಲೂಟಿ ಹೊಡೆದಿರುವ ಶೇ 40 ಕಮಿಷನ್ ಹಣವನ್ನು ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ, ಕಾಂಗ್ರೆಸ್ನ ಗುರಿ 150 ಸ್ಥಾನ ಗೆಲ್ಲುವುದಾಗಿರಲಿ’ ಎಂದು ರಾಜ್ಯ ಮುಖಂಡರಿಗೆ ಕಿವಿಮಾತು ಹೇಳಿದರು.
‘ಮೋದಿ ಉದ್ಯಮಿಗಳಿಗೆ ಬ್ಯಾಂಕ್ ಬಾಗಿಲು ತೆರೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಡವರಿಗೆ, ಕೃಷಿಕರಿಗೆ, ಮಹಿಳೆಯರಿಗೆ ಬ್ಯಾಂಕ್ ಬಾಗಿಲು ತೆರೆಯುತ್ತೇವೆ’ ಎಂದರು.
‘ಅದಾನಿ ಅವರಿಗೆ ಮೋದಿ ಕೋಟ್ಯಂತರ ಹಣ ನೀಡಿ ಮನಪೂರ್ವಕ ಸಹಾಯ ಮಾಡಿದಂತೆ ನಾವು ಕಾಂಗ್ರೆಸ್ಸಿಗರು ಮನಪೂರ್ವಕವಾಗಿ ಮಹಿಳೆಯರು, ಬಡವರಿಗೆ ಸಹಾಯ ಮಾಡುತ್ತೇವೆ’ ಎಂದು ಘೋಷಿಸಿದರು.
‘ಪ್ರಧಾನಿ ಮೋದಿ ಅವರಿಗೆ ತಾಕತ್ತಿದ್ದರೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಹಿಂದುಳಿದ ವರ್ಗದವರಿಗೆ (ಓಬಿಸಿ) ಅವರು ಮಾಡುವ ಅವಮಾನ ಎಂದೇ ನಾನು ಭಾವಿಸುತ್ತೇನೆ’ ಎಂದರು
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ನಾಲ್ಕು ಭರವಸೆ ಈಡೇರಿಸಲು 6 ತಿಂಗಳು, ವರ್ಷ ಕಾಯಬಾರದು. ಸರ್ಕಾರ ರಚನೆಯಾದ ಮೊದಲ ದಿನವೇ ಘೋಷಣೆ ಮಾಡಬೇಕು’ ಎಂದು ತಾಕೀತು ಮಾಡಿದರು.