ಮುಳಬಾಗಿಲು: ತ್ರೇತಾಯುಗ ಕಾಲದ ಆವಂತಿಕಾ ಕ್ಷೇತ್ರವೆಂದು ಹೇಳುವ ಆವಣಿ ಸೀತಮ್ಮನ ಬೆಟ್ಟವು ರಾಮಾಯಣ ಕಾಲದ ಕುರುಹುಗಳನ್ನು ಹೊಂದಿರುವ ಬೆಟ್ಟವಾಗಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ಆವಣಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟದಲ್ಲಿ ವನವಾಸಕ್ಕೆ ಬಂದಾಗ ಸೀತೆ ವಾಸವಿದ್ದರು ಎಂಬ ಪ್ರತೀತಿ ಇದೆ. ಪೌರಾಣಿಕ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ಹಲವು ಸೌಲಭ್ಯಗಳ ಕೊರೆತೆಯಿದೆ.
ವಾಲ್ಮೀಕಿ ಆಶ್ರಮ, ಲವ ಕುಶ ಜನಿಸಿದ ಸ್ಥಳ ಹಾಗೂ ಸೀತೆ ವಾಸವಿದ್ದ ಸಣ್ಣದೊಂದು ಮನೆ, ಧನುಷ್ಕೋಟಿ, ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆ ತರಿಸಿದ ಜಾಗ, ಮಹರ್ಷಿ ವಾಲ್ಮೀಕಿ ರಾಮನ ಮಕ್ಕಳಿಗೆ ಆಯುಧ, ಜ್ಞಾನ ಕಲಿಸಿದ ಸ್ಥಳ ಮತ್ತಿತರರ ಪೌರಾಣಿಕ ವಿಚಾರಗಳನ್ನು ಒಳಗೊಂಡು ಸ್ಥಳಗಳಿವೆ ಎಂಬ ಪ್ರತೀತಿ ಇದೆ.
ಬೆಟ್ಟದ ಮೇಲೆ ಇರುವ ವಾಲ್ಮೀಕಿ ಆಶ್ರಮದಲ್ಲಿ ಸೀತೆ ವನವಾಸದಲ್ಲಿದ್ದಾಗ ರಾಮನ ಅಶ್ವಮೇಧ ಕುದುರೆಯನ್ನು ಲವಕುಶರು ಕಟ್ಟಿಹಾಕಿದ ಹಾಗೂ ನಂತರ ಮಕ್ಕಳು ಹಾಗೂ ತಂದೆ ನಡುವೆ ಯುದ್ಧ ನಡೆದ ನಂತರ ರಾಮ, ಲಕ್ಷ್ಮಣ, ಭರತ, ಶತ್ರುಜ್ಞ ಹಾಗೂ ವಾಲಿ ಸುಗ್ರೀವರು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಹಾಗಾಗಿ ಶಿವರಾತ್ರಿ ಅಮಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಸಾವಿರಾರು ಮಂದಿ ಇಲ್ಲಿ ಸೇರುತ್ತಾರೆ. ಇಂತಹ ಬೆಟ್ಟದಲ್ಲಿ ನಿರಿನ ವ್ಯವಸ್ಥೆ, ಸುಸಜ್ಜಿತ ರಸ್ತೆ, ವಯೋವೃದ್ಧರಿಗೆ ರೋಪ್ ವೇ ಅಥವಾ ಬೆಟ್ಟದ ಮೇಲಕ್ಕೆ ವಿಶೇಷ ವಾಹನಗಳ ಸಂಚಾರ ಮತ್ತಿತರರ ಸೌಲಭ್ಯಗಳನ್ನು ಸಂಭಂದಿಸಿದ ಇಲಾಖೆಯವರು ಒದಗಿಸಿದರೆ ದೊಡ್ಡ ಪ್ರವಾಸಿ ತಾಣವಾಗುತ್ತದೆ.
ಆವಣಿ ಬೆಟ್ಟದ ತಟದಲ್ಲಿ ರಾಮಲಿಂಗೇಶ್ವರ ದೇವಾಲಯವಿದ್ದು, ಪ್ರತಿವರ್ಷ ಶಿವರಾತ್ರಿ ಸಮಯದಲ್ಲಿ ದೊಡ್ಡ ಮಟ್ಟದ ದನಗಳ ಜಾತ್ರೆ ಹಾಗೂ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಬರುತ್ತಾರೆ. ಫೆಬ್ರುವರಿ, ಮಾರ್ಚ್ನಲ್ಲಿ ಬಿಸಿಲು ಹೆಚ್ಚಾಗಿದ್ದು, ಬೆಟ್ಟದ ಮೇಲೆ ಹತ್ತುವ ರಸ್ತೆಯಲ್ಲಿ ನೆರಳಿನ ಆಸರೆ, ಬೆಟ್ಟಕ್ಕೆ ಸರಿಯಾದ ಕಾಲ್ನುಡಿಗೆ ಹಾಗೂ ವಾಹನಗಳಿಗೆ ರಸ್ತೆ, ಬೆಟ್ಟದ ದಾರಿಯಲ್ಲಿ ಅಲ್ಲಲ್ಲಿ ನೆರಳಿಗೆ ಶಾಶ್ವತ ಶೆಡ್ಡು, ಕುಡಿಯುವ ನೀರು ಮತ್ತಿತರರ ಯಾವುದೇ ರೀತಿಯ ಸೌಲಭ್ಯಳಿಲ್ಲದೆ ಜನರು ಪರದಾಡುವಂತಾಗಿದೆ.
ಪುರಾಣ ಪ್ರಸಿದ್ಧಿ ದೇವಾಲಯಕ್ಕೆ ಮುಜರಾಯಿ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಇನ್ನೂ ಸಂಪೂರ್ಣ ಸೌಲಭ್ಯ ಒದಗಿಸದೆ ಇರುವುದು ವಿಪರ್ಯಾಸ.