ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಮಾವಿನ ಮಡಿಲು ತುಂಬಿದ ದುಂಬಿ

ಶ್ರೀನಿವಾಸಪುರ ತಾಲ್ಲೂಕಿನ ತೋಟಗಳಲ್ಲಿ ಜೇನು ಹುಟ್ಟುಗಳ ಸಂಖ್ಯೆ ಹೆಚ್ಚಳ
Last Updated 11 ಫೆಬ್ರುವರಿ 2021, 1:14 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಮರಗಳು ಹೂವನ್ನು ಮುಡಿಗೇರಿಸಿಕೊಂಡಿದ್ದು, ಜೇನ್ನೊಣಗಳ ಝೇಂಕಾರ ಕಿವಿಗೆ ಬೀಳುತ್ತಿದೆ. ಮಾವಿನ ತೋಟಗಳಲ್ಲಿ ಜೇನು ಹುಟ್ಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಪ್ರತಿವರ್ಷ ಮಾವಿನ ಹೂ ಬರುತ್ತಿದ್ದಂತೆ ತಾಲ್ಲೂಕಿಗೆ ಜೇನ್ನೊಣಗಳ ವಲಸೆ ಶುರುವಾಗುತ್ತದೆ. ಸ್ಥಳೀಯ ಜೇನ್ನೊಣಗಳ ಜತೆಗೆ ಎಲ್ಲಿಂದಲೋ ಬರುವ ಜೇನ್ನೊಣಗಳು, ಮಾವಿನ ಮರಗಳು, ತೋಟದ ಬೇಲಿಗಳು ಹಾಗೂ ಎತ್ತರವಾದ ಮರಗಳಲ್ಲಿ ಹುಟ್ಟುಗಳನ್ನು ನಿರ್ಮಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಸಮೀಪದಲ್ಲಿ ನೀರು ಸಿಗುವ ಸ್ಥಳಗಳನ್ನು ನೆಲೆಸಲು ಆಯ್ಕೆ ಮಾಡಿಕೊಳ್ಳುತ್ತವೆ. ಬೆಳಗಾಗುತ್ತಿದಂತೆ ಹುಟ್ಟಿನಿಂದ ಹಾರಿ ಹೋಗುವ ಜೇನ್ನೊಣಗಳು ಮಾವಿನ ಹೂವಿನಿಂದ ಮಕರಂದ ಸಂಗ್ರಹಿಸಿ ತಂದು ಕೂಡಿಡುತ್ತವೆ.

ಇದರ ಜೊತೆಗೆ ಸಂತಾನೋತ್ಪತ್ತಿ ಯನ್ನೂ ಮಾಡಿ ಕೊಳ್ಳುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜೇನ್ನೊಣದ ಹಾರಾಟ ಹೆಚ್ಚಿದೆ. ಮಕರಂದವನ್ನು ಬಿಟ್ಟಿಯಾಗಿ ಹೀರಿ ಹೋಗುವುದಿಲ್ಲ. ಅದಕ್ಕೆ ಬದಲಾಗಿ ಹೂಗಳಲ್ಲಿ ಪರಾಗಸ್ಪರ್ಶ ಮಾಡಿ, ಕಾಯಿ ಬಿಡುವಂತೆ ಮಾಡುತ್ತವೆ. ಇದು ಜೇನ್ನೊಣದ ಸಹಜ ಪ್ರವೃತ್ತಿಯೂ ಹೌದು.

ಈ ಕಾಲದಲ್ಲಿ ಜೇನು ಹುಟ್ಟುಗಳನ್ನು ಗುರುತಿಸಿ, ಜೇನು ಸಂಗ್ರಹ ಮಾಡಿ ಮಾರಾಟ ಮಾಡುವ ಜನರೂ ಇದ್ದಾರೆ. ಸ್ಥಳೀಯರಷ್ಟೇ ಅಲ್ಲದೆ, ಹೊರ ಜಿಲ್ಲೆಗಳ ಹಾಗೂ ಸಮೀಪದ ಆಂಧ್ರಪ್ರದೇಶದಿಂದ ಬಂದ ಜೇನುಗಾರರು ಜೇನು ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ಸಂಗ್ರಹಿಸಿದ ಜೇನನ್ನು ಸಮೀಪದ ರಸ್ತೆ ಪಕ್ಕದಲ್ಲಿ ಹುಟ್ಟಿನೊಂದಿಗೆ ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಜೇನು ಕಲಬೆರಕೆ ಇಲ್ಲದಿರುವುದರಿಂದ, ಜೇನು ಪ್ರಿಯರು ಬೆಲೆಯನ್ನು ಒತ್ತಟ್ಟಿಗಿಟ್ಟು ಖರೀದಿಸಿ ತಿನ್ನುತ್ತಾರೆ. ಇನ್ನು ಕೆಲವರು ಮನೆಗಳಿಗೆ ಕೊಂಡೊಯ್ಯುತ್ತಾರೆ.

ತಾಲ್ಲೂಕಿನಲ್ಲಿ ಹಲವು ಬಗೆಯ ಜೇನ್ನೊಣಗಳು ಕಂಡುಬರುತ್ತವೆ. ಅವುಗಳನ್ನು ಕಡ್ಡಿ ಜೇನು, ಪೊಟರೆ ಜೇನು, ಹುತ್ತಜೇನು, ಹೆಜ್ಜೇನು, ಮುಸರೆ ಜೇನು ಎಂದೆಲ್ಲಾ ಕರೆಯುತ್ತಾರೆ. ಕಡ್ಡಿ ಜೇನು, ಹುತ್ತಜೇನು ಹಾಗೂ ಪೊಟರೆ ಜೇನು ರುಚಿಗೆ ಹೆಸರಾಗಿವೆ. ಹೆಜ್ಜೇನು ತಿನ್ನಲು ಯೋಗ್ಯವಾಗಿಲ್ಲ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಆದರೆ, ಜೇನುಗಾರರು ಇದನ್ನು ಇತರೇ ಜೇನಿನೊಂದಿಗೆ ಸೇರಿಸಿ ಮಾರಿಬಿಡುತ್ತಾರೆ. ಇನ್ನು ಮುಸರೆ ಜೇನನ್ನು ನಾಟಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ.

‘ಮಾವಿನ ಮರಗಳಿಗೆ ಯಾವುದೇ ಔಷಧಿ ಸಿಂಪಡಣೆ ಮಾಡದಿದ್ದ ಕಾಲದಲ್ಲಿ, ಇಲ್ಲಿ ಜೇನಿನ ಹೊಳೆಯೇ ಹರಿಯುತ್ತಿತ್ತು. ಈಗ ಮಾವಿನ ಹೂವಿನ ರಕ್ಷಣೆಗೆ ಔಷಧಿ ಸಿಂಪಡಿಸುವುದರಿಂದ ದುಂಬಿಗಳು ಬೇಲಿಗಳಲ್ಲಿನ ಪೊದೆಗಳನ್ನು ಅವಲಂಬಿಸಿವೆ. ಔಷಧಿ ತೋರಿಸದ ಹೊಂಗೆ ಮರಗಳಲ್ಲೂ ನೆಲೆ ಕಂಡುಕೊಂಡಿವೆ' ಎಂದು ಗುಂಡಮನತ್ತ ಗ್ರಾಮದ ಕೃಷಿಕ ಜಿ.ಎನ್. ಕುಬೇರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಎತ್ತರವಾದ ಮರಗಳಲ್ಲಿ ನೆಲೆಸುವ ಹೆಜ್ಜೇನು ಪರಾಗಸ್ಪರ್ಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಆದರೆ, ಅದರ ಕಡಿತಕ್ಕೆ ಹೆದರಿದ ಸಾರ್ವಜನಿಕರು, ಗ್ರಾಮಗಳ ಸಮೀಪದ ಮರಗಳಲ್ಲಿನ ಹೆಜ್ಜೇನು ಗೂಡುಗಳನ್ನು ರಾತ್ರಿ ಹೊತ್ತಿನಲ್ಲಿ ಸುಟ್ಟು ನಾಶಪಡಿಸುವುದು ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT