ಕೆಜಿಎಫ್: ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಗುರುವಾರ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬೆಮಲ್ ಕಾರ್ಖಾನೆಗೆ ಕಾರ್ಮಿಕರು ಗೈರು ಹಾಜರಾಗಿದ್ದರು.
ತುರ್ತು ಸಿಬ್ಬಂದಿ ಹೊರೆತುಪಡಿಸಿ ಎಲ್ಲಾ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾದರು. ಜಟಿ ಜಟಿ ಮಳೆಯಲ್ಲಿಯೂ ಬೆಮಲ್ ಮುಂಭಾಗದಲ್ಲಿ ಪ್ರದರ್ಶನ ನಡೆಸಿದ ಕಾರ್ಮಿಕರು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧಘೋಷಣೆ ಕೂಗಿದರು.
ಕಾರ್ಮಿಕ ಸಂಘದ ಮುಖಂಡ ಆಂಜನೇಯರೆಡ್ಡಿ ಮಾತನಾಡಿ, ಬೆಮಲ್ ಕಾರ್ಖಾನೆ ಪ್ರಾರಂಭವಾದ ದಿನದಿಂದಲೂ ಲಾಭದಲ್ಲಿಯೇ ನಡೆಯುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ. ಇಂತಹ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ. ಬೆಮಲ್ ಕಾರ್ಖಾನೆ ಮಾರಾಟಕ್ಕೆ ಇಲ್ಲ. ಖರೀದಿ ಮಾಡಲು ಬಂದವರನ್ನು ವಾಪಸ್ ಕಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಚಾಲಿತ ಯಂತ್ರಗಳು, ರಕ್ಷಣಾ ಇಲಾಖೆಗೆ ಸೇರಿದ ಯಂತ್ರಗಳು, ಮೆಟ್ರೊ ರೈಲು ಕೋಚ್ ಮೊದಲಾದ ಯಂತ್ರಗಳ ತಯಾರಿಕೆಯಲ್ಲಿ ಬೆಮಲ್ ಉನ್ನತ ಸ್ಥಾನ ಗಳಿಸಿದೆ. ದೇಶದ ಆರ್ಥಿಕತೆಗೆ ಹೆಚ್ಚು ಒತ್ತು ಕೊಡುತ್ತಿದೆ. ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಮೇಕ್ ಇನ್ ಇಂಡಿಯಾ ಘೋಷಣೆಯಡಿ ಉತ್ಪಾದನೆ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಇವು ಯಾವುದೂ ಕಣ್ಣಿಗೆ ಕಾಣುತ್ತಿಲ್ಲ. ದೊಡ್ಡ ಉದ್ಯಮಿಗಳ ಜೊತೆ ಶಾಮೀಲಾಗಿ ಬೆಮಲ್ ಅನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದೆ ಎಂದು ದೂರಿದರು.
ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಗಣೇಶ್ ಕುಮಾರ್, ಓ. ರಾಮಚಂದ್ರರೆಡ್ಡಿ, ಗೋಪಿನಾಥ್, ಮರಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.