ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಿಎಂಎಲ್ ಆಸ್ಪತ್ರೆ ಕಾರ್ಯಾರಂಭ

ಎರಡು ದಶಕದ ಹಿಂದೆ ಮುಚ್ಚಿದ್ದ ಆಸ್ಪತ್ರೆ; 250 ಹಾಸಿಗೆಗಳ ವ್ಯವಸ್ಥೆ
Last Updated 19 ಮೇ 2021, 19:47 IST
ಅಕ್ಷರ ಗಾತ್ರ

ಕೆಜಿಎಫ್‌: ‘ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಿದ್ದ ಬಿಜಿಎಂಎಲ್‌ ಆಸ್ಪತ್ರೆಯನ್ನು ಕೋವಿಡ್‌ ನಂತರವೂ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಗಣಿ ಸಚಿವಾಲಯ ಎಲ್ಲಾ ರೀತಿಯ ನೆರವು ನೀಡಲಿದೆ’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿನ ಚಾಂಪಿಯನ್ ರೀಫ್ಸ್‌ನಲ್ಲಿರುವ ಬಿಜಿಎಂಎಲ್ ಆಸ್ಪತ್ರೆಯನ್ನು ಗುರುವಾರ ವರ್ಚುಯಲ್ ಮೀಟ್‌ ಮೂಲಕ ಕೋವಿಡ್‌ ಆಸ್ಪತ್ರೆಯನ್ನಾಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಈ ಆಸ್ಪತ್ರೆಯನ್ನು 250 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿರುವುದು ಶ್ಲಾಘನೀಯ. ಆಸ್ಪತ್ರೆಯಲ್ಲಿದ್ದ 450 ಟ್ರ್ಯಾಕ್ಟರ್‌ನಷ್ಟು ತ್ಯಾಜ್ಯವನ್ನು ತೆಗೆದುಹಾಕುವಲ್ಲಿ ಸಂಸದ ಎಸ್‌. ಮುನಿಸ್ವಾಮಿ ಮತ್ತು ಅವರ ತಂಡ ಶ್ರಮವಹಿಸಿದೆ. ಆಸ್ಪತ್ರೆಯನ್ನು ಕೋವಿಡ್ ಅವಧಿ ಮುಗಿದ ನಂತರವೂ ಮುಂದುವರಿಸಬೇಕು ಎಂದು ಹೇಳಿದರು.

ಗಣಿ ಸಚಿವಾಲಯದಿಂದ ದೇಶದಲ್ಲಿ 32 ಕಡೆ ಆಮ್ಲಜನಕ ಉತ್ಪಾದನೆ ಮಾಡುವ ಘಟಕ ನೀಡಲಾಗಿದೆ. ಈ ಆಸ್ಪತ್ರೆಗೆ ನಿಮಿಷಕ್ಕೆ 1,000 ಲೀಟರ್ ದ್ರವೀಕೃತ ಆಮ್ಲಜನಕ ಉತ್ಪಾದನೆ ಮಾಡುವ ಘಟಕ ನೀಡಲಾಗುವುದು. ದುರಸ್ತಿ ಮತ್ತು ನವೀಕರಣಕ್ಕಾಗಿ ₹ 20 ಲಕ್ಷ ನೀಡಲಾಗುವುದು. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ 30 ಆಮ್ಲಜನಕ ಕಾನ್ಸ್‌ನ್‌ಟ್ರೇಟರ್ ನೀಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

‘ಸೋಮವಾರದಂದು ಬಿಜಿಎಂಎಲ್ ಆಸ್ಪತ್ರೆಗೆ ಭೇಟಿ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸಂಸದ ಎಸ್‌. ಮುನಿಸ್ವಾಮಿ ಮಾತನಾಡಿ, ಸುಮಾರು 200 ಕಾರ್ಯಕರ್ತರು 20 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿ, ಕೋವಿಡ್‌ ಆಸ್ಪತ್ರೆಯು ಶೀಘ್ರವಾಗಿ ಕಾರ್ಯಾರಂಭ ಮಾಡಲು ಶ್ರಮಿಸಿದ್ದಾರೆ. ಕೋವಿಡ್ ಅವಧಿ ಮುಗಿದ ನಂತರ ಬಿಜಿಎಂಎಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜನ್ನಾಗಿ ಪರಿವರ್ತನೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್ ಕೆ.ಎನ್‌. ಸುಜಾತಾ, ಡಾ.ಚಂದನ್‌, ಡಾ.ಸುನಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT