ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೂಸಂದ್ರ ನಿವಾಸಿ ಚೇತನ್ ಕುಮಾರ್ ಸಾವಿನ ಬಗ್ಗೆ ತನಿಖೆ ವಿಳಂಭ ಮಾಡುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ ಸದಸ್ಯರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಘಟಕದ ಮುನಿಯಪ್ಪ ಮಾತನಾಡಿ, ‘ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಕೆ.ಆರ್.ಚೇತನ್ ಕುಮಾರ್ ಮರಣೋತ್ತರ ಪರೀಕ್ಷೆಯ ವರದಿಯನ್ನು ವೈದ್ಯರಿಂದ ತರಸಿಕೊಂಡು ಮೃತನ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಪೊಲೀಸರು ನಿರ್ಲಕ್ಷ ತೋರುತ್ತಿದ್ದಾರೆ’ ಎಂದು ದೂರಿದರು.
‘ಚೇತನ್ಕುಮಾರ್ ಕೂಸಂದ್ರ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಕೃಷಿ ಹೊಂಡ ಯಾರುದೆಂಬುದನ್ನು ತಿಳಿದುಕೊಳ್ಳಲು ಪೊಲೀಸರು ಕೃಷಿ ಹೊಂಡ ಮಾಲೀಕರಿಗೆ ಮಾಹಿತಿ ಕೇಳಿದ್ದರು, ಆದರೆ ಸುಳ್ಳು ಮಾಹಿತಿ ನೀಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿರುವ ಕೃಷಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧವೂ ಕಂದಾಯ ಇಲಾಖೆಯವರು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೃತ ಚೇತನ್ ಕುಮಾರ್ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್, ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ವಿಜಿ, ಪದಾಧಿಕಾರಿಗಳಾದ ವೆಂಕಟರವಣ, ವೆಂಕಟರವಣಪ್ಪ, ಎಚ್.ಮುನಿಚೌಡಪ್ಪ, ಎಸ್.ಡಿ.ಮುನಿರಾಜು, ಸಿ.ಈರಪ್ಪ, ವಿವಿಧ ತಾಲ್ಲೂಕು ಸಂಚಾಲಕರಾದ ಮಾಲೂರು ವೆಂಕಟೇಶ್, ಮುಳಬಾಗಿಲು ವೆಂಕಟೇಶ್, ಶ್ರೀನಿವಾಸಪುರ ರೆಡ್ಡಪ್ಪ ಹಾಜರಿದ್ದರು.