ಕೋಲಾರ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಮತ ಎಣಿಕೆಗೆ ದಿನಗಣನೆ ಆರಂಭವಾಗಿದೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ, ಸಮಾವೇಶ, ರೋಡ್ ಷೋ, ಚುನಾವಣಾ ಪ್ರಚಾರ, ಮನೆ ಮನೆ ಭೇಟಿಯಿಂದ ಬಸವಳಿದಿದ್ದ ಅಭ್ಯರ್ಥಿಗಳು ಶುಕ್ರವಾರ ಕುಟುಂಬ ಸದಸ್ಯರೊಂದಿಗೆ ರಜೆಯ ಮಜಾ ಅನುಭವಿಸಿದರು. ಮತ್ತೆ ಕೆಲ ಅಭ್ಯರ್ಥಿಗಳು ನಿತ್ಯದ ರಾಜಕೀಯ ಜಂಜಾಟದಿಂದ ದೂರವಾಗಿ ಲಘು ಪ್ರವಾಸಕ್ಕೆ ತೆರಳಿದರು.
ಮಾರ್ಚ್ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಸಂಪೂರ್ಣವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿದ್ದ ಅಭ್ಯರ್ಥಿಗಳ ದಿನಚರಿಯೇ ಬದಲಾಗಿತ್ತು. ರಾತ್ರಿ ತಡವಾಗಿ ಮಲಗುವುದು, ಪ್ರಚಾರದ ನಡುವೆ ಸಮಯ ಸಿಕ್ಕರೆ ಮುಖಂಡರ ಮನೆಯಲ್ಲೋ ಅಥವಾ ಸಭೆಯ ಸ್ಥಳದಲ್ಲೋ ಊಟ ತಿಂಡಿ, ಮೊಬೈಲ್ನಲ್ಲಿ ಸತತ ಸಂಭಾಷಣೆ, ನಿರಂತರ ಪ್ರಯಾಣವೇ ಅಭ್ಯರ್ಥಿಗಳ ದಿನಚರಿಯಾಗಿತ್ತು.
ಮೂಡಣದಲ್ಲಿ ನೇಸರ ಮೂಡುವುದೇ ತಡ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರ ಪಡೆ ಕಟ್ಟಿಕೊಂಡು ಬೀದಿಗಿಳಿಯುತ್ತಿದ್ದ ಅಭ್ಯರ್ಥಿಗಳು ಪ್ರಚಾರ ಮುಗಿಸಿ ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಸರಿ ರಾತ್ರಿವರೆಗೆ ಸಭೆ ಮೇಲೆ ಸಭೆ ನಡೆಯುತ್ತಿದ್ದವು. ಅಭ್ಯರ್ಥಿಗಳಿಗೆ ಕುಂತರೂ ನಿಂತರೂ ರಾಜಕೀಯದ್ದೇ ಧ್ಯಾನವಾಗಿತ್ತು.
ರಾಜಕೀಯ ಜಂಜಾಟದ ನಡುವೆ ಪತ್ನಿ, ಮಕ್ಕಳು, ಸಂಬಂಧಿಕರ ಜತೆ ಸರಿಯಾಗಿ ಮಾತನಾಡಿ ವಾರಗಳೇ ಕಳೆದಿದ್ದವು. ಪುಸ್ತಕ ಹಾಗೂ ದಿನಪತ್ರಿಕೆ ಓದುವ ಹವ್ಯಾಸ, ಸಂಗೀತ ಕೇಳುವ ಚಟ, ಹೊಲ ಗದ್ದೆ ಸುತ್ತುವ ಗೀಳು ಎಲ್ಲವೂ ದೂರವಾಗಿದ್ದವು. ಗೃಹಸ್ಥಾಶ್ರಮ ಪ್ರವೇಶಿಸಿದ್ದರೂ ಚುನಾವಣಾ ಬಿಸಿಯಿಂದಾಗಿ ತಾತ್ಕಾಲಿಕವಾಗಿ ಬ್ರಹ್ಮಚಾರಿಗಳಾಗಿದ್ದರು.
ಕುಶಲೋಪರಿ: ರಾಜಕೀಯ ಚಟುವಟಿಕೆಗಳಿಂದ ಆಯಾಸಗೊಂಡಿದ್ದ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬೆಳಿಗ್ಗೆ ತಡವಾಗಿ ನಿದ್ದೆಯಿಂದ ಎದ್ದರು. ಸ್ನಾನದ ನಂತರ ದೇವರ ಪೂಜೆ ಮಾಡಿ ಗೆಲುವಿಗೆ ಪ್ರಾರ್ಥಿಸಿದರು. ಆ ವೇಳೆಗಾಗಲೇ ಜಯನಗರ ಬಡಾವಣೆಯಲ್ಲಿನ ಅವರ ಮನೆ ಮುಂದೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿದ್ದರು. ಸಮಯ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು.
ಕೆಲ ಕಾಲ ದಿನಪತ್ರಿಕೆ ಓದಿದ ಮುನಿಯಪ್ಪ ಕಾರ್ಯಕರ್ತರೊಂದಿಗೆ ಕುಶಲೋಪರಿ ನಡೆಸಿದರು. ಕ್ಷೇತ್ರವಾರು ಮತದಾನದ ಬಗ್ಗೆ ಪಕ್ಷದ ಮುಖಂಡರು ಜತೆ ಚರ್ಚಿಸಿ ಮನದಲ್ಲೇ ಸೋಲು ಗೆಲುವಿನ ಲೆಕ್ಕಾಚಾರ ಹಾಕಿದರು.
ನಂತರ ಕುಟುಂಬ ಸದಸ್ಯರೊಂದಿಗೆ ಬೆಳಗಿನ ಉಪಾಹಾರ ಸೇವಿಸಿ, ಕೆಲ ಹೊತ್ತು ವಿಶ್ರಾಂತಿ ಪಡೆದರು. ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಉತ್ತರ ಕರ್ನಾಟಕದತ್ತ ಪ್ರಯಾಣ ಬೆಳೆಸಿದರು.
ಗೂಡಿಗೆ ಪ್ರಯಾಣ: ಕಮಲ ಪಾಳಯದ ಅಭ್ಯರ್ಥಿ ಎಸ್.ಮುನಿಸ್ವಾಮಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ಎಸ್.ಜಿ ಲೇಔಟ್ನಲ್ಲಿ ಮನೆಯೊಂದನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದಿದ್ದರು. ಈ ಮನೆಯಿಂದಲೇ ಅವರು ಚುನಾವಣೆಗೆ ತಂತ್ರಗಾರಿಕೆ ರೂಪಿಸುತ್ತಿದ್ದರು.
ಈ ಮನೆಯಲ್ಲೇ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಚುನಾವಣಾ ಫಲಿತಾಂಶದ ಬಗ್ಗೆ ಬೆಳಿಗ್ಗೆ ಬಿಸಿ ಬಿಸಿ ಚರ್ಚೆ ನಡೆಸಿದರು. ಆಪ್ತರೊಂದಿಗೆ ಹರಟುತ್ತಾ ಉಪಾಹಾರ ಸೇವಿಸಿದರು. ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಮುಖಂಡರೊಂದಿಗೆ ಹೋಟೆಲ್ನಲ್ಲಿ ಭೋಜನ ಸವಿದರು.
ಬೆಂಗಳೂರಿನ ಕಾಡುಗೋಡಿ ಬಳಿ ಇರುವ ಬೆಳತ್ತೂರಿನ ತಮ್ಮ ಗೂಡಿಗೆ ಸಂಜೆ ಪ್ರಯಾಣ ಬೆಳೆಸಿದರು. ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಸದಾ ಗಿಜಿಗುಡುತ್ತಿದ್ದ ಎಸ್.ಜಿ ಲೇಔಟ್ನಲ್ಲಿನ ಅವರ ಮನೆ ಸಂಜೆ ವೇಳೆಗೆ ಜನರಿಲ್ಲದೆ ಭಣಗುಡುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.