ಮಾಲೂರು: ಸ್ಮಶಾನ ಸೇರಿದಂತೆ ಯಾವುದೇ ಮೂಲ ಸೌಲಭ್ಯವಿಲ್ಲದ ಚಿಕ್ಕ ಲಕ್ಕಸಂದ್ರ ಗ್ರಾಮ ಇಲ್ಲಿಯವರೆಗೂ ಗ್ರಾಮ ಠಾಣೆಗೂ ಸೇರದಿರುವುದು ವಿಪರ್ಯಾಸವಾಗಿದೆ.
ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕ ಲಕ್ಕಸಂದ್ರ ಗ್ರಾಮದಲ್ಲಿ ಸುಮಾರು 25 ಮನೆಗಳಿದ್ದು, 50 ಮತದಾರರಿದ್ದಾರೆ. ಆದರೆ ಇಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ದೀಪ ಸೇರಿದಂತೆ ಯಾವುದೇ ಮೂಲಸೌಕರ್ಯವಿಲ್ಲದೆ ಗ್ರಾಮಸ್ಥರು ನಲುಗುತ್ತಿದ್ದಾರೆ.
ಚರಂಡಿ ಇಲ್ಲದೆ ಮನೆಗಳ ಮುಂಭಾಗ ಕೊಳಚೆ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಕಾಯಿಲೆಗಳಿಂದ ಬಳಲುವಂತಾಗಿದ್ದಾರೆ.
ಈ ಗ್ರಾಮದಿಂದ ಆರೇಳು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಲಕ್ಕೂರು ಮತ್ತು ಚಿಕ್ಕತಿರುಪತಿಗೆ ಹೋಗುತ್ತಿದ್ದಾರೆ. ಗ್ರಾಮದಿಂದ ಸುಮಾರು ಒಂದು ಕಿ.ಮೀ ಕಾಲು ನಡುಗೆಯಲ್ಲಿ ಮುಖ್ಯರಸ್ತೆಗೆ ನಡೆದು ಬಂದು ಬಸ್ ಹಿಡಿದು ಮತ್ತೆ ಶಾಲೆಗೆ ಹೋಗಬೇಕಾಗಿದೆ.
ಪಂಚಾಯಿತಿ ವತಿಯಿಂದ ವಾರಕ್ಕೆ ಒಂದೆರಡು ಬಾರಿ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಶುದ್ಧ ಕುಡಿಯುವ ನೀರು ಇಲ್ಲ. ಗ್ರಾಮಕ್ಕೆ ರಸ್ತೆಯಿಲ್ಲದೆ ಕಾಲು ದಾರಿಯಲ್ಲೇ ನಡೆದು ಹೋಗಬೇಕಾಗಿದೆ. ಗ್ರಾಮದ ಸುತ್ತಲೂ ನೀಲಗಿರಿ ತೋಪು ಇದ್ದು, ವಿದ್ಯುತ್ ದೀಪಗಳ ಕೊರತೆಯಿಂದ ರಾತ್ರಿ ವೇಳೆ ಸಂಚರಿಸಲು ಕಷ್ಟವಾಗಿದ್ದು, ಬೆಳಕು ಇರುವಾಗಲೇ ಹಸುಗಳ ಹಾಲು ಕರೆದು ಡೈರಿಗೆ ಕಳುಹಿಸಬೇಕಾಗಿದೆ. ರಾತ್ರಿ ವೇಳೆ ಈ ಗ್ರಾಮಕ್ಕೆ ಸಂಚಾರ ಅಸಾಧ್ಯವಾಗಿದೆ.
ಸ್ಮಶಾನವೂ ಇಲ್ಲ: ಚಿಕ್ಕ ಲಕ್ಕಸಂದ್ರ ಗ್ರಾಮಸ್ಥರಿಗೆ ಇಲ್ಲಿಯರೆಗೂ ಸ್ಮಶಾನದ ಸೌಲಭ್ಯ ಇಲ್ಲದಾಗಿದೆ. ಭೂಮಿ ಇರುವವರು ಅವರ ಸ್ವಂತ ಭೂಮಿಯಲ್ಲಿ ಸಮಾಧಿ ಮಾಡಿಕೊಳ್ಳುತ್ತಾರೆ. ಉಳಿದವರ ಪರಸ್ಥಿತಿ ಹೇಳ ತೀರದಾಗಿದೆ.
ಕೂಲಿ ಮಾಡಿ ಬದುಕುವವರೇ ಈ ಗ್ರಾಮದಲ್ಲಿ ಹೆಚ್ಚಾಗಿದ್ದಾರೆ. ಇಲ್ಲಿ ರಸ್ತೆ ಚರಂಡಿ ಇಲ್ಲದೆ ಮನೆಗಳ ಮುಂದೆಯೇ ಕೊಳಚೆ ನೀರು ಹರಿಯುತ್ತಿದ್ದು ಸೊಳ್ಳೆಗಳ ಕಾಟವೂ ಹೆಚ್ಚಾಗಿದೆರಾಮಕ್ಕ ಚಿಕ್ಕ ಲಕ್ಕಸಂದ್ರ ಗ್ರಾಮದ ನಿವಾಸಿ
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಕೊಳವೆ ಬಾವಿ ನೀರನ್ನೇ ಕುಡಿಯುತ್ತಿದ್ದೇವೆ. ವಿದ್ಯುತ್ ದೀಪಗಳ ಕೊರತೆಯಿಂದ ಬಹಳ ತೊಂದರೆಯಾಗುತ್ತಿದೆ.ಸೀತಮ್ಮ ಚಿಕ್ಕ ಲಕ್ಕಸಂದ್ರ ಗ್ರಾಮದ ನಿವಾಸಿ
ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಕೆ ಚಿಕ್ಕ ಲಕ್ಕಸಂದ್ರ ಗ್ರಾಮ ಇನ್ನು ಗ್ರಾಮ ಠಾಣೆಗೆ ಸೇರಿಲ್ಲ. ಗ್ರಾಮ ಠಾಣೆಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮದಲ್ಲಿ ಕೆಲವು ಮನೆಗಳ ಬಳಿ ವಿದ್ಯುತ್ ದೀಪ ಅಳವಡಿಸಲಾಗಿದೆ. ಇನ್ನು ಅಳವಡಿಸುವ ಕೆಲಸ ಆಗಬೇಕಾಗಿದೆ. ಸ್ಮಶಾನ ಭೂಮಿ ಮಂಜುರಾತಿಗೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಲಕ್ಕಸಂದ್ರ ಕ್ಷೇತ್ರದ ಗ್ರಾ.ಪಂ.ಸದಸ್ಯ ವಿದ್ಯಾ ಗುರುನಾಥರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.