ಕೋಲಾರ: ‘ಸಾರ್ವಜನಿಕರು ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಡಿ.19ರಂದು ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ತಿಳಿಸಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಾದ್ಯಂತ 40 ಸಾವಿರ ಪ್ರಕರಣಗಳ ಪೈಕಿ 20 ಸಾವಿರ ಪ್ರಕರಣಗಳು ಅದಾಲತ್ನಲ್ಲಿ ರಾಜಿಗೆ ಬರುವ ಅಂದಾಜಿದೆ. ಇವುಗಳಲ್ಲಿ 5,560 ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರುತಿಸಲಾಗಿದೆ’ ಎಂದು ವಿವರಿಸಿದರು.
‘ದೌರ್ಜನ್ಯ, ಕೊಲೆ, ವಿಚ್ಛೇದನ ಪ್ರಕರಣ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣ ಸೇರಿದಂತೆ ವಿಶೇಷ ಕಾಯ್ದೆಯ ಪ್ರಕರಣಗಳು ಅದಾಲತ್ ವ್ಯಾಪ್ತಿಗೆ ಒಳಪಡುವುದಿಲ್ಲ. ಮೋಟಾರು ಕಾಯ್ದೆಯಡಿ ದಾಖಲಾದ ಪ್ರಕರಣ, ಸಣ್ಣಪುಟ್ಟ ಕಳ್ಳತನ ಹಾಗೂ ಜಗಳ, ಜಮೀನು ವಿವಾದ, ಕೌಟುಂಬಿಕ ವಿವಾದದ ಪ್ರಕರಣಗಳನ್ನು ಕಕ್ಷಿದಾರರು ಒಪ್ಪಿದರೆ ಅದಾಲತ್ನಲ್ಲಿ ಇತ್ಯರ್ಥಪಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.
‘ಈಗಾಗಲೇ ಇತ್ಯರ್ಥವಾದ ಪ್ರಕರಣಗಳ ಸಂಬಂಧ ಅದಾಲತ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಪ್ರಕರಣದಲ್ಲಿ ಯಾರು ಸೋಲುತ್ತೇವೆ ಎಂಬ ಆತಂಕ ಬಿಟ್ಟು ಕಕ್ಷಿದಾರರು ಅದಾಲತ್ನ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.