ಕೋಲಾರ: ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಕುಟುಂಬ ಹಾಗೂ ಹಳ್ಳಿಗಳು ಅಭಿವೃದ್ಧಿಯತ್ತ ಸಾಗುತ್ತವೆ. ಓದಲುಆಸಕ್ತಿಯಿರುವ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಬಿಟ್ಟು, ಓದಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಿ ಕಾನೂನು ಪ್ರಾಧ್ಯಾಪಕಿ ಪ್ರಸನ್ನಕುಮಾರಿ ಹೇಳಿದರು.
ಭಾರತ ಸೇವಾದಳ, ರೋಟರಿ ಸೆಂಟ್ರಲ್, ಜನವಾದಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಹಿಳಾ ಜಾಗೃತಿ ಕಾರ್ಯಾಗಾರ ಹಾಗೂ ಕ್ಯಾಪ್ಟನ್ ಲಕ್ಷ್ಮೀ ಸಹಗಲ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಓದಿನ ಹಕ್ಕಿನಿಂದ ಮಾತ್ರ. ಮಹಿಳೆಯರ ಪರವಾದ ಶಾಸನಗಳನ್ನು ರೂಪಿಸಲು ಶಾಸನಸಭೆಗಳಲ್ಲಿ ಮಹಿಳೆಯರ ಪರ ಧ್ವನಿ ಎತ್ತುವವರು ಇಲ್ಲ. ಮನುಷ್ಯನಿಗೆ ದಿನನಿತ್ಯದ ಆಹಾರ, ಉದ್ಯೋಗ, ರಕ್ಷಣೆ, ಶಿಕ್ಷಣದ ಬಗ್ಗೆ ಚರ್ಚಿಸುವುದು ಬಿಟ್ಟು ಅನವಶ್ಯಕ ವಿಚಾರಗಳನ್ನು ಚರ್ಚಿಸುವ ಶಾಸನಗಳಾಗಿವೆ ಎಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಶ್ರೀನಾಥ್ ಮಾತನಾಡಿ, ದೇಶದ ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ರೀತಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಸ್ತ್ರೀ ರೋಗ ತಜ್ಞೆ ಡಾ.ಶಾಂತಾ, ಭಾರತ ಸೇವಾದಳದ ಕೆ.ಎಸ್.ಗಣೇಶ್, ಜಿ.ಶ್ರೀನಿವಾಸ್, ಸುಧಾಕರ್, ಕೆ.ಜಯದೇವ್, ದಾನೇಶ್, ರವಿಕುಮಾರ್, ಮಂಜುಳಾ, ಭಾಗ್ಯಮ್ಮ,ರೇಣುಕಾ, ಸುಜಾತಾ ಇದ್ದರು.