ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ– ಮಗುವಿಗೆ ಕೊರೊನಾ ಸೋಂಕು

ಸೋಂಕಿತ ಪತಿಯ ಸಂಪರ್ಕದ ನಂಟು: ಬಂಗಾರಪೇಟೆ ತಲ್ಲಣ
Last Updated 25 ಮೇ 2020, 14:54 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹಾವಳಿ ಮುಂದುವರಿದಿದ್ದು, 7 ವರ್ಷದ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ಇಬ್ಬರಿಗೆ ಸೋಂಕು ಇರುವುದು ಸೋಮವಾರ ಖಚಿತವಾಗಿದೆ.

ಬಂಗಾರಪೇಟೆಯ ಇಂದಿರಾ ಆಶ್ರಯ ಬಡಾವಣೆಯಲ್ಲಿ ಶನಿವಾರ (ಮೇ 23) ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ ಮಗುವಿಗೂ ಇದೀಗ ಸೋಂಕು ತಗುಲಿದೆ.

ಮಗುವಿನ ತಂದೆ ಲಾರಿ ಚಾಲಕರಾಗಿದ್ದು, ಅವರಿಗೆ ಬಂಗಾರಪೇಟೆಯ ವಿಜಯನಗರದಲ್ಲಿನ ಸೋಂಕುಪೀಡಿತ ವ್ಯಕ್ತಿಯ (ಸೋಂಕಿತ ಸಂಖ್ಯೆ 1587) ಪ್ರಾಥಮಿಕ ಸಂಪರ್ಕದಿಂದ ಸೋಂಕು ಹಬ್ಬಿತ್ತು. ಲಾರಿ ಚಾಲಕ ಸೋಂಕು ಪೀಡಿತರಾಗಿರುವುದು ದೃಢಪಟ್ಟ ನಂತರ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಸಂಬಂಧಿಯೊಬ್ಬರನ್ನು ಆರೋಗ್ಯ ಇಲಾಖೆ ಸಿಬ್ಬಂದಿಯು ಮನೆಯಲ್ಲೇ ಕ್ವಾರಂಟೈನ್‌ ಮಾಡಿದ್ದರು.

ಅಲ್ಲದೇ, ಅವರೆಲ್ಲರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ 4 ಮಂದಿಯ ಪೈಕಿ ತಾಯಿ ಮತ್ತು ಕಿರಿಯ ಮಗುವಿಗೆ ಸೋಂಕು ಇರುವುದಾಗಿ ಪ್ರಯೋಗಾಲಯ ತಜ್ಞರು ವರದಿ ನೀಡಿದ್ದಾರೆ. ದಂಪತಿಯ ಹಿರಿಯ ಮಗು ಮತ್ತು ಸಂಬಂಧಿಯ ವೈದ್ಯಕೀಯ ವರದಿ ಬರಬೇಕಿದೆ.

ಸೋಂಕಿತ ತಾಯಿ ಮತ್ತು ಮಗುವನ್ನು ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿತ ತಾಯಿ ಮತ್ತು ಮಗುವಿನ ಸಂಪರ್ಕಕ್ಕೆ ಬಂದಿರುವ ಅಕ್ಕಪಕ್ಕದ ಮನೆಯ 14 ಮಂದಿಯನ್ನು ಪತ್ತೆ ಹಚ್ಚಿ ಬಂಗಾರಪೇಟೆ ತಾಲ್ಲೂಕಿನ ಎಳೇಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದ್ದಾರೆ.

ನಿದ್ದೆಗೆಡಿಸಿದ ಸೋಂಕು: ಬಂಗಾರಪೇಟೆಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಬಂಗಾರಪೇಟೆ ಪಟ್ಟಣದ ವಿಜಯನಗರದಲ್ಲಿ ಮೇ 21ರಂದು ಕೊರೊನಾ ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು. ನಂತರ ಮೇ 23ರಂದು ಹೊಸದಾಗಿ 3 ಮಂದಿಗೆ ಸೋಂಕು ತಗುಲಿರುವುದು ಗೊತ್ತಾಯಿತು. ಐದು ದಿನ ಕಳೆಯುವಷ್ಟರಲ್ಲಿ ಸೋಂಕಿತರ ಸಂಖ್ಯೆ ಇದೀಗ 6ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೇರಿದೆ. ಬಂಗಾರಪೇಟೆ ಹೊರತುಪಡಿಸಿದರೆ ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 8 ಮಂದಿ ಸೋಂಕಿತರಿದ್ದಾರೆ. ಉಳಿದಂತೆ ಕೆಜಿಎಫ್‌ ತಾಲ್ಲೂಕಿನಲ್ಲಿ 2, ಮಾಲೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ತಲಾ ಒಬ್ಬರು ಸೋಂಕಿತರಿದ್ದಾರೆ.

ಕಂಟೈನ್‌ಮೆಂಟ್‌: ಇಂದಿರಾ ಆಶ್ರಯ ಬಡಾವಣೆಯಲ್ಲಿನ ಸೋಂಕಿತರ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ಪುರಸಭೆಯಿಂದ ಸೀಲ್‌ಡೌನ್‌ ಮಾಡಲಾಯಿತು. ಅಲ್ಲದೇ, ಬಡಾವಣೆಯಲ್ಲಿ ಸೋಮವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.

ಬಡಾವಣೆ ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಬಡಾವಣೆಯೊಳಗೆ ಬರದಂತೆ ಅಧಿಕಾರಿಗಳು ಸೂಚನೆ ನೀಡಿದರು. ಬಡಾವಣೆ ನಿವಾಸಿಗಳ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT