ಕೋಲಾರ: ಶಿಕ್ಷಕರ ವರ್ಕ್ ಫ್ರಮ್ ಹೋಂ ಮುಗಿದಿದ್ದು, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಶಾಲೆಗಳಿಗೆ ತೆರಳಿ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ಸೂಚಿಸಿದ್ದಾರೆ.
ವಿದ್ಯಾಗಮದಡಿ ಭೌತಿಕವಾಗಿ ಶಾಲೆ ಆರಂಭಿಸುವವರೆಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಡಬೇಕು. ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ ಪ್ರೇರೇಪಿಸಲು ಪಠ್ಯ ಮತ್ತು ಅಭ್ಯಾಸ ಪುಸ್ತಕಗಳು, ಇತರೆ ಕಲಿಕಾ ಸಾಮಗ್ರಿಗಳನ್ನು ಮಕ್ಕಳ ಮನೆಗೆ ತಲುಪಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲ್ಪನಿಕ ಕಲಿಕಾ ಕೋಣೆಯಡಿ ಪ್ರತಿ ಶಾಲೆಯ 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಬೇಕು. 14 ವರ್ಷ ವಯೋಮಾನದ ಎಲ್ಲಾ ಮಕ್ಕಳನ್ನು ವಯೋಮಾನಕ್ಕೆ ಅನುಗುಣವಾಗಿ ದಾಖಲಾತಿ ಮಾಡಿಕೊಳ್ಳಬೇಕು. ಅಕ್ಕಪಕ್ಕದ ಮಕ್ಕಳನ್ನು ಒಗ್ಗೂಡಿಸಿ ಚಿಕ್ಕ ಕಲಿಕಾ ತಂಡ ರಚಿಸಬೇಕು, ಮಕ್ಕಳಿಗೆ ಅಂತರ ಕಾಯ್ದುಕೊಂಡು ಪಠ್ಯಪುಸ್ತಕ ಒದಗಿಸಬೇಕು ಎಂದು ಹೇಳಿದ್ದಾರೆ.
ಮಧ್ಯಾಹ್ನ ಉಪಹಾರ ಯೋಜನೆಯಡಿ ಒಂದು ತಿಂಗಳ ಆಹಾರ ಪದಾರ್ಥಗಳನ್ನು ಪೋಷಕರಿಗೆ ನೀಡಬೇಕು. ಮಕ್ಕಳು ಹಾಗೂ ಮಾರ್ಗದರ್ಶಿ ಶಿಕ್ಷಕರ ನಡುವಿನ ಸಂಪರ್ಕ, ಶಿಕ್ಷಕರು ಜೂಮ್, ಸಿಸ್ಕೋ, ಗೂಗಲ್ ಕ್ಲಾಸ್ ರೂಮ್, ಸ್ಪಾರ್ಟ್ಫೋನ್ ತಂತ್ರಜ್ಞಾನ ಬಳಸಿ ವೆಬಿನಾರ್ ಮೂಲಕ ಪಠ್ಯ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸ್ವಯಂ ಕಲಿಕೆ: ತಂತ್ರಜ್ಞಾನದ ಮೇಲೆ ಅವಲಂಬಿತರಾಗದೇ ತರಗತಿ ನಂತರ ಸ್ವಯಂ ಕಲಿಕೆಗೂ ಪೂರಕವಾಗುವ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪಾಠಗಳನ್ನು ನೋಡುವಂತೆ ಅರಿವು ಮೂಡಿಸಿ ಕಡ್ಡಾಯ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಜತೆಗೆ ಮಕ್ಕಳು ಪಾಠ ನೋಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಪ್ರತಿನಿತ್ಯ ಪ್ರತಿ 3 ತರಗತಿಗಳಿಗೆ 8 ಪಾಠ ಪ್ರಸಾರ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಪಾಠದ ನಂತರ ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುವ ಪಾಠಗಳನ್ನು ಜ್ಞಾನದೀಪ, ಯೂ-ಟ್ಯೂಬ್ ಚಾನೆಲ್, ಮಕ್ಕಳ ವಾಣಿ, ಮತ್ತು ದೀಕ್ಷಾ ಪೋರ್ಟಲ್ನಲ್ಲೂ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.