ಕೆಜಿಎಫ್: ರಾಬರ್ಟ್ಸನ್ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಶೆಯಲ್ಲಿದ್ದ ರೋಗಿಯೊಬ್ಬ ಕರ್ತವ್ಯದ ಮೇಲಿದ್ದ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.
ಊರಿಗಾಂಪೇಟೆಯ ಸುಮಾರು 25 ವರ್ಷದ ರೋಗಿಯನ್ನು ಕುಟುಂಬದ ಸದಸ್ಯರು ಚಿಕಿತ್ಸೆಗಾಗಿ ರಾತ್ರಿ ಆಸ್ಪತ್ರೆಗೆ ಕರೆ ತಂದಿದ್ದರು. ನಶೆಯಲ್ಲಿದ್ದ ಆತ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಒರಟಾಗಿ ವರ್ತಿಸುತ್ತಿದ್ದ.
ಸರಿಯಾಗಿ ವರ್ತಿಸುವಂತೆ ರಾತ್ರಿ ಪಾಳಿಯದಲ್ಲಿದ್ದ ಡಾ. ಮೋಹನ್ ಮತ್ತು ನರ್ಸ್ ಸೂಚಿಸಿದರು. ಇದರಿಂದ ಕೋಪಗೊಂಡ ರೋಗಿ ಏಕಾಏಕಿ ಡಾ. ಮೋಹನ್ ಕಪಾಳಕ್ಕೆ ಬಾರಿಸಿ, ಹಲ್ಲೆಗೆ ಮುಂದಾದ.
ಕೂಡಲೇ ಆಸ್ಪತ್ರೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ರೋಗಿಯನ್ನು ತಡೆದು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು. ಘಟನೆಯಿಂದ ನೊಂದ ರೋಗಿಯ ಕುಟುಂಬ ವರ್ಗದವರು ವೈದ್ಯರ ಕ್ಷಮೆ ಕೋರಿದರು. ನಂತರ ವೈದ್ಯರ ಮನವಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಲಿಲ್ಲ.