ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾಗಿದೆ: ಮುನಿಯಪ್ಪ

ಕೋಲಾರದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಂಗ್‌ ಸೇವೆ ಉದ್ಘಾಟನೆ
Last Updated 1 ಸೆಪ್ಟೆಂಬರ್ 2018, 14:27 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರದಲ್ಲಿ ರೈಲ್ವೆ ಮತ್ತು ಅಂಚೆ ಇಲಾಖೆಯು ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಹೆಸರಾಗಿದ್ದು, ಅಧಿಕಾರಿಗಳು ಜನರ ನಂಬಿಕೆ ಉಳಿಸಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಕಿವಿಮಾತು ಹೇಳಿದರು.

ಅಂಚೆ ಇಲಾಖೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಂಗ್‌ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರವು ಅಂಚೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಬದಲಾವಣೆ ತಂದಿರುವುದು ಹರ್ಷದಾಯಕ’ ಎಂದು ಸಂತಸ ವ್ಯಕ್ತಪಡಿಸಿದರು.

‘ಅಂಚೆ ಮೂಲಕ ನಡೆಯುತ್ತಿರುವ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ಆಧುನಿಕ ರೀತಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆ ಪ್ರತಿಯೊಬ್ಬರಿಗೂ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಮುಂದಿರುವ ಜಪಾನ್, ಇಂಗ್ಲೆಂಡ್‌ಗಿಂತ ಭಾರತವೇನೂ ಕಡಿಮೆ ಇಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಇಂತಹ ಕಾರ್ಯಕ್ರಮದ ಮೂಲಕ ರುಜುವಾತು ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನರ ಸಂಪರ್ಕ: ‘ನಿರಂತರವಾಗಿ ಜನರ ಸಂಪರ್ಕದಲ್ಲಿರುವ ಅಂಚೆ ಇಲಾಖೆಯು ಮತ್ತಷ್ಟು ಸಕ್ರಿಯವಾಗಿ ಕೆಲಸ ನಿರ್ವಹಿಸಿದರೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಒಳ್ಳೆಯ ಹೆಸರು ಪಡೆಯಬಹುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

‘ಸ್ವಾತಂತ್ರ್ಯ ನಂತರ ಅಂಚೆ ಇಲಾಖೆಯು ದೇಶದಾದ್ಯಂತ ಉತ್ತಮ ಸೇವೆ ಸಲ್ಲಿಸುತ್ತಿದೆ. ದೇಶದ ಮೂಲೆ ಮೂಲೆಗೂ,ಪತ್ರಗಳು, ಮನಿ ಆರ್ಡರ್, ಪಾರ್ಸಲ್‌ ತಲುಪಿಸುವ ಕಾರ್ಯವನ್ನು ಲೋಪವಿಲ್ಲದೆ ನಿರ್ವಹಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ’ ಎಂದು ಶ್ಲಾಘಿಸಿದರು.

‘ಅಂಚೆ ಬ್ಯಾಂಕಿಂಗ್ ಮೂಲಕ ಇತ್ತೀಚೆಗೆ ಅಡುಗೆ ಅನಿಲ ಸಬ್ಸಿಡಿ, ಸಾಮಾಜಿಕ ಭದ್ರತೆ, ಪಿಂಚಣಿ, ವಿದ್ಯಾರ್ಥಿವೇತನ ಪಾವತಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗಿರುವ ಪ್ರತಿ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ದೊರಕಿಸುವ ಕೆಲಸ ಅಂಚೆ ಸೇವಾ ಕೇಂದ್ರಗಳಿಂದ ಆಗಬೇಕು’ ಎಂದು ಸಲಹೆ ನೀಡಿದರು.

ಸೇವೆ ದೊರೆಯುತ್ತದೆ: ‘ಫಲಾನುಭವಿಗಳಿಗೆ ನೇರವಾಗಿ ಸೌಕರ್ಯ ತಲುಪಿಸುವ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಆಧಾರ್ ಯೋಜನೆ ಜಾರಿಗೆ ತಂದಿತು. ಪ್ರತಿ ವ್ಯಕ್ತಿ ವೈಯಕ್ತಿಕವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ಜನಧನ್ ಖಾತೆ ತೆರೆಯಲಾಗಿದೆ. ಅಂಚೆ ಇಲಾಖೆಯು ಬ್ಯಾಂಕಿಂಗ್ ಸೇವೆ ನೀಡುವುದರಿಂದ ದೇಶದ ಕಟ್ಟಕಡೆಯ ವ್ಯಕ್ತಿಗೂ ಸೇವೆ ದೊರೆಯುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

‘ಜಿಲ್ಲೆಯ ಜನರಿಗೆ ಅಂಚೆ ಇಲಾಖೆ ಮೂಲಕ ವಿವಿಧ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಖಜಾನೆಯಿಂದ ಅನುದಾನ ಬಿಡುಗಡೆಯಾದ 7 ದಿನದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪಿಸಬೇಕು. ಬ್ಯಾಂಕ್ ಖಾತೆ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಫಲಾನುಭವಿಗಳಿಗೆ ಅರಿವು ಮೂಡಿಸಬೇಕು’ ಎಂದರು.

ಉತ್ತಮ ಪ್ರತಿಕ್ರಿಯೆ: ‘ನಗದು ರಹಿತ ವ್ಯವಹಾರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದ್ದು, ಈಗ ಹೆಚ್ಚಿನ ಸಂಖ್ಯೆಯ ಜನ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅಂಚೆ ಇಲಾಖೆ ಸೂಪರಿಂಟೆಂಡೆಂಟ್‌ ಎಲ್.ಮಂಜುನಾಥ್ ವಿವರಿಸಿದರು

‘ಖಾತೆದಾರರಿಗೆ ಹಣ ಉಳಿಸಲು ಮತ್ತು ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ನೂತನ ಸೇವೆ ಸಹಕಾರಿಯಾಗಿದೆ. ಖಾತೆ ತೆರೆಯಲು ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಆಧಾರ್ ಮತ್ತು ಮೊಬೈಲ್ ಸಂಖ್ಯೆ ನೀಡಿದರೆ ಸಾಕು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಪಾಲ್ಗೊಂಡಿದ್ದರು.


* 1.50 ಲಕ್ಷ ಅಂಚೆ ಕಚೇರಿಗಳು ದೇಶದಲ್ಲಿವೆ
* 1.30 ಲಕ್ಷ ಅಂಚೆ ಕಚೇರಿಗಳು ಗ್ರಾಮೀಣ ಭಾಗದಲ್ಲಿವೆ
* 4.50 ಲಕ್ಷ ಮಂದಿ ಅಂಚೆ ನೌಕರರು
* 1,91,271 ಜನರಿಗೆ ಜಿಲ್ಲೆಯಲ್ಲಿ ಪಿಂಚಣಿ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT