ಮಾಲೂರು: ಶಾಸಕ ಜೆ.ಸೋಮಶೇಖರ್ ರೆಡ್ಡಿ ಅವರ ಮೇಲೆ ಪಟ್ಟಣದ ಪೊಲೀಸರು ಎಫ್ಐಆರ್ ದಾಖಲಿಸ ಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಮಾತನಾಡಿ, ಇತ್ತೀಚೆಗೆ ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳ ಪರವಾಗಿ ಮೆರವಣಿಗೆ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ ಕಾಯ್ದೆ ವಿರುದ್ದವಾಗಿ ಹೋರಾಟ ಮಾಡಿದಂತಹ ಪಕ್ಷಗಳ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಶೇ 80 ರಷ್ಟು ಇರುವ ಹಿಂದುಗಳು ಬೀದಿಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅಲ್ಪಸಂಖ್ಯಾತರ ವಿರುದ್ದ ಪರೋಕ್ಷವಾಗಿ ದ್ವೇಷ ಭಾವನೆ ಬೆಳೆಯುವಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮದುಸೂದನ್, ಮುಖಂಡರಾದ ಸಿ.ಲಕ್ಷ್ಮಿನಾರಾಯಣ್, ವಿಜಯ ನರಸಿಂಹ, ಅಶ್ವಥ್ ರೆಡ್ಡಿ, ಶಬ್ಬೀರ್, ಮಂಜುನಾಥ್, ರವಿ ಇದ್ದರು.