ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳೇಗಾರಿಕೆ ತೋರುವ ಪೋಸ್ಟ್‌ಮನ್‌ಗಳು

ಪಿಂಚಣಿ ಸೌಲಭ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೆಂಡಾಮಂಡಲ
Last Updated 2 ಮೇ 2019, 14:22 IST
ಅಕ್ಷರ ಗಾತ್ರ

ಕೋಲಾರ: ‘ಅಂಚೆ ಇಲಾಖೆ ಪೋಸ್ಟ್‌ಮನ್‌ಗಳು ಫಲಾನುಭವಿಗಳಿಗೆ ಪಿಂಚಣಿ ಹಣ ನೀಡದೆ ಪಾಳೇಗಾರಿಕೆ ತೋರುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ಪಿಂಚಣಿ ಸೌಲಭ್ಯ ಸಂಬಂಧ ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಂಚೆ ಇಲಾಖೆ ನೌಕರರ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲವಾಗಿದೆ. ನೌಕರರ ವಂಚನೆ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆ ತೆರೆದು ಪಿಂಚಣಿ ಹಣ ಜಮಾ ಮಾಡುವಂತೆ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಈವರೆಗೂ ಈ ಕೆಲಸ ಸಂಪೂರ್ಣವಾಗಿಲ್ಲ. ಪ್ರತಿ ತಿಂಗಳು ಹಣ ಕೊಡದೆ ಸತ್ತಾಯಿಸುವವರ ವಿವರ ನನ್ನ ಬಳಿ ಇದೆ. ಫಲಾನುಭವಿಗಳು ಬಾಕಿ ಹಣ ಕೇಳಿದರೆ ಬೆದರಿಕೆ ಸಹ ಹಾಕುತ್ತಾರೆ. ಸಿಬ್ಬಂದಿ ಈ ರೀತಿ ವರ್ತಿಸುವುದು ಸರಿಯಾ?’ ಎಂದು ಪ್ರಶ್ನಿಸಿದರು.

ಕಮಿಷನ್‌ ಪಡೆಯುತ್ತಿದ್ದಾರೆ: ‘ವೃದ್ಧರು, ಅಂಗವಿಕಲರು, ವಿಧವೆಯರು ಸೇರಿದಂತೆ ದುರ್ಬಲರಿಗೆ ಸರ್ಕಾರ ಪಿಂಚಣಿ ಸೌಕರ್ಯ ಕಲ್ಪಿಸುತ್ತಿದೆ. ಅದನ್ನು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪಿಸುವುದು ಪೋಸ್ಟ್‌ಮನ್‌ಗಳ ಕರ್ತವ್ಯ. ಆದರೆ, ಪೋಸ್ಟ್‌ಮನ್‌ಗಳು ತಿಂಗಳುಗಟ್ಟಲೇ ಹಣ ಬಾಕಿ ಇಟ್ಟುಕೊಂಡು ಫಲಾನುಭವಿಗಳನ್ನೇ ಬೆದರಿಸುತ್ತಿದ್ದಾರೆ. ₹ 50 ಕಮಿಷನ್‌ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ಕಿಡಿಕಾರಿದರು.

‘ಅದಾಲತ್‌ನಲ್ಲಿ ಮತ್ತು ಅಂಚೆ ಕಚೇರಿಗಳಿಗೆ ಭೇಟಿ ನೀಡಿದಾಗ ಪೋಸ್ಟ್‌ಮನ್‌ಗಳ ಕರ್ತವ್ಯ ನಿರ್ಲಕ್ಷ್ಯ, ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದೂರು ಬಂದಿವೆ. ತಪ್ಪು ಮಾಡುತ್ತಿರುವವರ ಬಗ್ಗೆ ನಾನು ಹೇಳಬೇಕಿಲ್ಲ. ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಏನು ಕಷ್ಟ? ಫಲಾನುಭವಿ ಖಾತೆಗೆ ನೇರವಾಗಿ ಹಣ ಹಾಕುವ ಮೂಲಕ ಸಮಸ್ಯೆ ಬಗೆಹರಿಸದಿದ್ದರೆ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಗುಡುಗಿದರು.

ಸಂಬಂಧವಿಲ್ಲ: ‘ಕೆಲವರು ಪಿಂಚಣಿ ಹಣ ನಂಬಿಕೊಂಡೇ ಜೀವನ ನಡೆಸುತ್ತಿದ್ದಾರೆ. ಅವರಿಗೆ ತಿಂಗಳುಗಟ್ಟಲೇ ಹಣ ನೀಡದೆ ಸತಾಯಿಸಿದರೆ ಪರಿಸ್ಥಿತಿ ಏನಾಗಬೇಕು? ಪೋಸ್ಟ್‌ಮನ್‌ಗಳ ಸಂಬಳ ತಡ ಮಾಡಿದರೆ ಸುಮ್ಮನಿರುತ್ತಾರಾ? ಬೇರೆ ಜಿಲ್ಲೆಗಳಲ್ಲಿ ಮನಿ ಆರ್ಡರ್‌ ಪ್ರಮಾಣ ಕಡಿಮೆಯಿದೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಹೆಚ್ಚಿರುವುದಕ್ಕೆ ಕಾರಣ ಏನೆಂದು ತಿಳಿಸಿ’ ಎಂದು ಸೂಚಿಸಿದರು.

‘ನಾವು ಆನ್‌ಲೈನ್‌ನಲ್ಲಿ ಪಿಂಚಣಿ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ಕಳುಹಿಸುತ್ತೇವೆ. ಆ ನಂತರದ ಕೆಲಸಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಜಿಲ್ಲಾ ಖಜಾನೆ ಅಧಿಕಾರಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಂಚೆ ಇಲಾಖೆ ಅಧಿಕಾರಿಗಳು, ‘ಖಜಾನೆ- 1ರಿಂದ ಮಾಹಿತಿ ಬಂದ ಕೂಡಲೇ 5 ದಿನದೊಳಗೆ ಪರಿಶೀಲಿಸಿ ಬಳಿಕ ಚೀಟಿ ಮುದ್ರಿಸಿ, ತಲುಪಿಸುತ್ತೇವೆ. ಹಣ ಫಲಾನುಭವಿ ಕೈಸೇರಲು ಕನಿಷ್ಠ 1 ತಿಂಗಳಾಗುತ್ತದೆ. ಖಜಾನೆ- 2ರಲ್ಲಿ ಯಾವ ರೀತಿಯ ಸಮಸ್ಯೆಯಾಗುತ್ತಿದೆ ಎಂಬು ನಮಗೆ ಗೊತ್ತಿಲ್ಲ’ ಎಂದು ಹೇಳಿದರು.

ಜೂನ್‌ ಗಡುವು: ‘ಜಿಲ್ಲೆಯಲ್ಲಿ 2.40 ಲಕ್ಷ ಮಂದಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಈ ಪೈಕಿ 1,53,650 ಮಂದಿ ಮನಿ ಆರ್ಡರ್ ಪಡೆಯುತ್ತಿದ್ದು, ಈ ಬಗ್ಗೆ ಅಂಚೆ ಕಚೇರಿವಾರು ಮಾಹಿತಿ ಸಲ್ಲಿಸಿ. ಮೇ 6ರೊಳಗೆ 50 ಸಾವಿರ ಮಂದಿಗೆ, ಮೇ ಅಂತ್ಯದೊಳಗೆ ಕನಿಷ್ಠ 1 ಲಕ್ಷ ಮಂದಿ ಖಾತೆಗೆ ಹಣ ಜಮಾ ಮಾಡಬೇಕು. ಉಳಿದ ಫಲಾನುಭವಿಗಳನ್ನು ಜೂನ್‌ ತಿಂಗಳಲ್ಲಿ ಖಾತೆ ವ್ಯಾಪ್ತಿಗೆ ಒಳಪಡಿಸಲೇಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT