ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಶೇ 75.69ರಷ್ಟು ಫಲಿತಾಂಶ ಲಭ್ಯ

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: 12 ದಿನದಲ್ಲಿ ಫಲಿತಾಂಶ ಪ್ರಕಟ
Last Updated 12 ಅಕ್ಟೋಬರ್ 2021, 13:33 IST
ಅಕ್ಷರ ಗಾತ್ರ

ಕೋಲಾರ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 358 ವಿದ್ಯಾರ್ಥಿಗಳ ಪೈಕಿ 271 ಮಂದಿ ತೇರ್ಗಡೆಯಾಗುವ ಮೂಲಕ ಶೇ 75.69ರಷ್ಟು ಫಲಿತಾಂಶ ಬಂದಿದೆ.

237 ಬಾಲಕರು ಪರೀಕ್ಷೆಗೆ ಕುಳಿತಿದ್ದು, ಈ ಪೈಕಿ 184 ಮಂದಿ ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಪರೀಕ್ಷೆಗೆ ಕುಳಿತಿದ್ದ 121 ಬಾಲಕಿಯರಲ್ಲಿ 87 ಮಂದಿ ತೇರ್ಗಡೆಯಾಗಿದ್ದಾರೆ.

ಕೋವಿಡ್ ಆತಂಕದ ನಡುವೆಯೂ ಜುಲೈನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಬರೆಯಲಾಗದ ವಿದ್ಯಾರ್ಥಿಗಳು, ಕೋವಿಡ್ ಸೋಂಕಿತರಾಗಿ ಪರೀಕ್ಷೆಯಿಂದ ದೂರ ಉಳಿದವರು, ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಅನುತ್ತೀರ್ಣರಾಗಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸೆಪ್ಟೆಂಬರ್‌ನಲ್ಲಿ ಪೂರಕ ಪರೀಕ್ಷೆ ನಡೆಸಿತ್ತು. ಪರೀಕ್ಷೆ ನಡೆದ ಕೇವಲ 12 ದಿನದಲ್ಲಿ ಇದೀಗ ಫಲಿತಾಂಶ ಪ್ರಕಟಗೊಂಡಿದೆ.

ಕೋವಿಡ್ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಐಚ್ಛಿಕ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜವಿಜ್ಞಾನಕ್ಕೆ ತಲಾ 40 ಅಂಕಗಳಂತೆ ಒಂದೇ ದಿನ ಪರೀಕ್ಷೆ ಹಾಗೂ ಭಾಷಾ ವಿಷಯಗಳಾದ ಕನ್ನಡ, ಇಂಗ್ಲೀಷ್, ಹಿಂದಿಗೆ ತಲಾ 40 ಅಂಕದಂತೆ ಒಂದೇ ದಿನ ಪರೀಕ್ಷೆ ನಡೆಸಲಾಗಿತ್ತು. ಬಹುಆಯ್ಕೆ ಪ್ರಶ್ನೆಪತ್ರಿಕೆಯಾದ ಕಾರಣದಿಂದ ಶೀಘ್ರ ಫಲಿತಾಂಶ ಪ್ರಕಟಗೊಂಡಿದೆ.

ತಾಲ್ಲೂಕುವಾರು ಫಲಿತಾಂಶ: ಬಂಗಾರಪೇಟೆ ತಾಲ್ಲೂಕಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು 66 ವಿದ್ಯಾರ್ಥಿಗಳಲ್ಲಿ 51 ಮಂದಿ ತೇರ್ಗಡೆಯಾಗುವ ಮೂಲಕ ಶೇ 72.02ರಷ್ಟು ಫಲಿತಾಂಶ ಬಂದಿದೆ. ಕೆಜಿಎಫ್ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದಿದ್ದ 37 ವಿದ್ಯಾರ್ಥಿಗಳಲ್ಲಿ 31 ಮಂದಿ ಉತ್ತೀರ್ಣರಾಗುವ ಮೂಲಕ ಶೇ 83.78ರಷ್ಟು ಫಲಿತಾಂಶ ಲಭಿಸಿದೆ.

ಕೋಲಾರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತಿದ್ದ 81 ವಿದ್ಯಾರ್ಥಿಗಳ ಪೈಕಿ 65 ಮಂದಿ ಪಾಸಾಗಿದ್ದು, ಶೇ 80.24 ಫಲಿತಾಂಶ ಬಂದಿದೆ. ಮಾಲೂರು ತಾಲ್ಲೂಕಿನಲ್ಲಿ ಪರೀಕ್ಷೆಗೆ 57 ಮಂದಿ ಕುಳಿತಿದ್ದು, 43 ಮಂದಿ ಉತ್ತೀರ್ಣರಾಗಿ ಶೇ 75.43ರಷ್ಟು ಫಲಿತಾಂಶ ದಾಖಲಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಪರೀಕ್ಷೆ ಬರೆದಿದ್ದ 60 ವಿದ್ಯಾರ್ಥಿಗಳಲ್ಲಿ 46 ಮಂದಿ ಉತ್ತೀರ್ಣರಾಗಿ ಶೇ 76.66ರಷ್ಟು ಫಲಿತಾಂಶ ಲಭಿಸಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತಿದ್ದ 57 ವಿದ್ಯಾರ್ಥಿಗಳ ಪೈಕಿ 35 ಮಂದಿ ಉತ್ತಿರ್ಣರಾಗಿ ಶೇ 61.4ರಷ್ಟು ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳಿಗೆ ಸಲಹೆ: ‘ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳು ಬಹುಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಯಡಿ ಕೇವಲ 2 ದಿನ ನಡೆದಿದೆ. ಆದರೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ 2019 ಹಾಗೂ ಅದಕ್ಕೂ ಹಿಂದಿನ ವರ್ಷಗಳಂತೆ 6 ದಿನ ನಡೆಯಲಿದ್ದು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆ ಮುಂದುವರಿಸಬೇಕು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಸಲಹೆ ನೀಡಿದ್ದಾರೆ.

‘ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಸರ್ಕಾರ ಅ.21ರಿಂದಲೇ 1ನೇ ತರಗತಿಯಿಂದ 5ನೇ ತರಗತಿ ನಡೆಸಲೂ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ತರಗತಿಗಳಿಗೆ ಹಾಜರಾಗಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT