ನರಸಾಪುರ: ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಕಳವು ಯತ್ನ ನಡೆದಿದೆ.
ಸಂಘದ ಕಚೇರಿಯ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಹಣವಿದ್ದ ಭದ್ರತಾ ಕಪಾಟು ತೆರೆಯಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಳಿಕ ಕಚೇರಿಯ ಉಳಿದ ಅಲ್ಮೇರಾಗಳನ್ನು ತೆರೆದು ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ಕಚೇರಿ ಸಿ.ಸಿ ಕ್ಯಾಮೆರಾಗಳ ಡಿವಿಆರ್ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಳ್ಳರು ಹಣಕ್ಕಾಗಿ ಅಲ್ಮೇರಾಗಳಲ್ಲಿ ಹುಡುಕಾಡಿದ್ದಾರೆ. ಆದರೆ, ಹಣವಿದ್ದ ಭದ್ರತಾ ಕಪಾಟು ತೆರೆಯಲು ಸಾಧ್ಯವಾಗಿಲ್ಲ, ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆಯೇ ಹೊರತು ಯಾವುದೇ ದಾಖಲೆಪತ್ರ ಕದ್ದೊಯ್ದಿಲ್ಲ’ ಎಂದು ಸಂಘದ ಅಧ್ಯಕ್ಷ ಮುನಿರಾಜು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ವೇಮಗಲ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.