ಕೋಲಾರ: ತಾಲ್ಲೂಕಿನ ಮುದುವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಬಜ್ಜಿ, ಬೋಂಡಾ, ಪಾನಿಪುರಿ ಮತ್ತಿತರ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
ಮಕ್ಕಳ ಸಂತೆಯಲ್ಲಿ 50ಕ್ಕೂ ಹೆಚ್ಚು ಅಂಗಡಿಗಳು ಶಾಲೆಯ ಆವರಣದಲ್ಲಿ ತಲೆಯೆತ್ತುವ ಮೂಲಕ ಮಕ್ಕಳಲ್ಲೂ ವ್ಯಾಪಾರದ ಅನುಭವ ಮೂಡಿಸಲು ಕಾರಣವಾಯಿತು.
ಮಕ್ಕಳು ವಿವಿಧ ರೀತಿಯ ಸೊಪ್ಪು,ಬೀನ್ಸ್, ಹೀರೇಕಾಯಿ, ಮುಲಂಗಿ, ಕ್ಯಾರೇಟ್, ಕುಂಬಳಕಾಯಿ, ಸೋರೇಕಾಯಿ ಮತ್ತಿತರವುಗಳ ಜತೆಗೆ ಬೇಲ್ ಪುರಿ, ಬೋಂಡಾ, ಬಜ್ಜಿ ಮಾರಾಟ ಮಾಡಿದರು.
ಶಾಲೆಯ ಮೆಟ್ರಿಕ್ ಸಂತೆಗೆ ಚಾಲನೆ ನೀಡಿದ ಮುಖ್ಯ ಶಿಕ್ಷಕ ಶಂಕರೇಗೌಡ ಮಾತನಾಡಿ, ‘ವ್ಯಾಪಾರ ವಹಿವಾಟಿನಿಂದ ಮಕ್ಕಳಲ್ಲಿ ನಿತ್ಯ ಜೀವನದ ಅನುಭವವಾಗುತ್ತದೆ, ತಂದೆ, ತಾಯಿ ಅಂಗಡಿಗೆ ಹೋಗಿ ತರಕಾರಿ ತರಲು ತಿಳಿಸಿದರೆ ಯಾವ ರೀತಿ ವ್ಯಾಪಾರ ಮಾಡಬೇಕೆಂಬ ಅರಿವು ಸಿಕ್ಕಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
ಗ್ರಾಮದ ಮುಖಂಡ ವಿ.ಮಂಜುನಾಥ್ ಮಾತನಾಡಿ, ‘ಕೇವಲ ಪಾಠ, ಕ್ರೀಡೆಗೆ ಸೀಮಿತವಾಗದೇ ಮಕ್ಕಳಲ್ಲಿ ಸಾಮಾಜಿಕ ಬದುಕಿನ ಪರಿಚಯ ಮಾಡಿಕೊಡುವ ಉದ್ದೇಶದಿಂದ ಮಕ್ಕಳ ಸಂತೆ ನೆರವಾಗಿದೆ’ ಎಂದರು.
ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಖಜಾಂಚಿ ಆಂಜನೇಯ, ಎಸ್ಡಿಎಂಸಿ ಅಧ್ಯಕ್ಷ ರಮೇಶ್, ಸದಸ್ಯರಾದ ಆನಂದ್, ರತ್ನಮ್ಮ, ಮುಖಂಡರಾದ ವಿ.ಮಂಜುನಾಥ್, ಶ್ರೀನಿವಾಸ್, ಬಾಬು, ಶಿಕ್ಷಕರಾದ ಕೆ.ವಿ.ಪ್ರತಿಭಾ, ಸಿ.ಟಿ.ಜಯಲಕ್ಷ್ಮಿ, ಚೌಡಮ್ಮ, ಆಂಜನೇಯ, ಗಿರಿಜಮ್ಮ, ವೇದಾ ಹಾಜರಿದ್ದರು.