ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಸೋಮವಾರ ಎಣಿಕೆ ಮಾಡಲಾಯಿತು.
ತಹಶೀಲ್ದಾರ್ ಯು.ನಾಗರಾಜ ಮಾತನಾಡಿ,‘ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ದೇವಸ್ಥಾನ ಬಂದ್ ಮಾಡಲಾಗಿದೆ. ಆದರೂ ಹುಂಡಿಯಲ್ಲಿ ಇರುವ ಹಣ ಹಾಳಾಗುವ ಸಾಧ್ಯತೆ ಇದ್ದ ಕಾರಣ ಸೋಮವಾರ ಎಣಿಕೆ ಮಾಡಲಾಯಿತು. ಈ ವೇಳೆ ಹುಂಡಿಯಲ್ಲಿ ಒಟ್ಟು ₹637458 ಸಂಗ್ರಹವಾಗಿದೆ. ಎರಡು ನೇಪಾಳ ದೇಶದ ನಾಣ್ಯಗಳಿವೆ. ಮಾರ್ಚ್ 18 ರಂದು ಹುಂಡಿ ಹಣ ಎಣಿಕೆ ಮಾಡಿದ್ದ ವೇಳೆಯಲ್ಲಿ ₹1542204 ಸಂಗ್ರಹವಾಗಿತ್ತು’ ಎಂದು ತಿಳಿಸಿದರು.
ಕಂದಾಯ ಇಲಾಖೆ ಸಿಬ್ಬಂದಿ ಅನಂತ ಜೋಷಿ, ಮೈಬೂಬ ಅಲಿ, ಮಂಜುನಾಥ ಹಿರೇಮಠ, ಮಹೇಶ ದಲಾಲ್, ಶರಣಪ್ಪ, ಅಭಿಷೇಕ, ವಿರೇಶ, ವೆಂಕಟೇಶ ಸೇರಿ ದೇಗುಲದ ಸಿಬ್ಬಂದಿ ಇದ್ದರು.