ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಚಿಕ್ಕರಾಂಪುರ ಹಾಗೂ ಆನೆಗೊಂದಿ ಭಾಗದಲ್ಲಿ ನಿರ್ಮಿಸಲಾದ ಅನಧಿಕೃತ ರೆಸಾರ್ಟ್ ಮಾಲೀಕರಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ‘ಮೂರು ದಿನಗಳ ಒಳಗೆ ಸ್ವಯಂ ಪ್ರೇರಿತವಾಗಿ ರೆಸಾರ್ಟ್ ತೆರವು ಮಾಡಿಕೊಳ್ಳಬೇಕು’ ಎಂದು ಸೂಚಿದ್ದಾರೆ.
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರದ ವ್ಯಾಪ್ತಿಗೆ ಗಂಗಾವತಿ ತಾಲ್ಲೂಕಿನ 15 ಗ್ರಾಮಗಳು ಬರುತ್ತಿದ್ದು, ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಬೇಕಿದ್ದರೂ ಪ್ರಾಧಿಕಾರದ ಪರವಾನಗಿ ಕಡ್ಡಾಯ. ಆದರೆ ಇದನ್ನು ಉಲ್ಲಂಘಿಸಿ ಕಂದಾಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳದೇ ಅನಧಿಕೃತವಾಗಿ ರೆಸಾರ್ಟ್ಗಳನ್ನು ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಕೆಲ ವರ್ಷಗಳ ಹಿಂದೆ ವಿರೂಪಾಪುರಗಡ್ಡೆ, ಸಾಣಾಪುರ, ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ನ್ಯಾಯಾಲಯಕ್ ಕೆಹೋದಾಗ, ನ್ಯಾಯಾಲಯ ತೆರವಿಗೆ ಆದೇಶದ ನೀಡಿತ್ತು. ಈ ವೇಳೆ ಅಂದಿನ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಎಲ್ಲ ರೆಸಾರ್ಟ್ಗಳನ್ನು ತೆರವುಮಾಡಿ ನೆಲಸಮ ಮಾಡಿತ್ತು.
ಕಳೆದ ಎರಡು ವರ್ಷಗಳಲ್ಲಿ ಮತ್ತೆ ಅನಧಿಕೃತ ರೆಸಾರ್ಟ್ಗಳು ತಲೆ ಎತ್ತಿದಾಗ, ಕೆಲವರು ನ್ಯಾಯಾಂಗ ನಿಂದನೆ ಮಾಡಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ವರ್ಷ ಜೂ.19 ಹಾಗೂ 20 ರಂದು ಹಂಪಿ ಪ್ರಾಧಿಕಾರ ಅಧಿಕಾರಿಗಳು ಎಲ್ಲ ರೆಸಾರ್ಟ್ ತೆರವು ಮಾಡಿಸಿ ಜಪ್ತಿ ಮಾಡಿದ್ದರು.
ನ್ಯಾಯಾಂಗ ನಿಂದನೆ ಪ್ರಕರಣ ಚಾಲ್ತಿಯಲ್ಲಿರುವಾಗಲೇ ಜಪ್ತಿ ಮಾಡಿದ ರೆಸಾರ್ಟ್ಗಳನ್ನು ಮಾಲೀಕರು ಪುನಃ ಆರಂಭಿಸಿದ್ದಾರೆ. ಈ ಕುರಿತು ಪ್ರಾಧಿಕಾರಕ್ಕೆ ಹಲವು ದೂರುಗಳು ಬಂದಿವೆ. ಮೂರು ದಿನಗಳ ಒಳಗೆ ಸ್ವಯಂಪ್ರೇರಿತವಾಗಿ ತೆರವು ಮಾಡಬೇಕು ಎಂದು ನೋಟಿಸ್ನಲ್ಲಿ ಹೇಳಲಾಗಿದೆ.