ಯಲಬುರ್ಗಾ: ‘ಎಲ್ಲ ವಾರ್ಡ್ಗಳ ಅಭಿವೃದ್ಧಿಗೆ ಬದ್ಧ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ 15 ವಾರ್ಡ್ಗಳಿವೆ. ಹಂತ ಹಂತವಾಗಿ ಎಲ್ಲ ವಾರ್ಡ್ಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಯಲಬುರ್ಗಾವನ್ನು ಮಾದರಿ ಪಟ್ಟಣವನ್ನಾಗಿಸಲಾಗುತ್ತದೆ ಎಂದರು.
11ನೇ ವಾರ್ಡ್ನ ವಿದ್ಯಾಸಾಗರ ಕಾಲೊನಿ ಹಾಗೂ 14ನೇ ವಾರ್ಡ್ನ ಮೀನಾಕ್ಷಿ ನಗರದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯ ಅಡಿ ₹11.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪ್ರಸ್ತುತ ಪಟ್ಟಣದ 11ಮತ್ತು 14ನೇ ವಾರ್ಡ್ಗಳಲ್ಲಿ ಎಸ್ಸಿಪಿ, ಟಿಎಸ್ಪಿ ಅನುದಾನದಡಿ ಗುಣಮಟ್ಟದ ಸಿ.ಸಿ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲೂ ಸಿ.ಸಿ ರಸ್ತೆ, ಚರಂಡಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಯಲಬುರ್ಗಾ ಪಟ್ಟಣದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸುವಂತೆ ಶಾಸಕ ಹಾಲಪ್ಪ ಆಚಾರ್ ಅವರಿಗೆ ಮನವಿ ಮಾಡಲಾಗಿದೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಅನುದಾನ ಲಭ್ಯವಾದ ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಪ.ಪಂ ಸದಸ್ಯ ಕಳಕಪ್ಪ ತಳವಾರ, ವಸಂತ ಭಾವಿಮನಿ ಮಾತನಾಡಿ,‘ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಸಂತಸದ ಸಂಗತಿ’ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಮುಖಂಡ ಈರಪ್ಪ ಬಣಕಾರ್, ಗಣ್ಯರಾದ ಸುರೇಶ ಮಾಟೂರ ಹಾಗೂ ನಿಂಗಪ್ಪ ಕಮತರ್ ಇದ್ದರು.