ಕೊಪ್ಪಳ: ‘ಇಳಕಲ್ ನಗರಸಭೆ ಅಧ್ಯಕ್ಷೆ ಶೋಭಾ ಆಮದಾಳ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣಕನಕಪ್ಪ ಚಲವಾದಿ ಎಚ್ಚರಿಕೆ ನೀಡಿದ್ದಾರೆ.
ಶೋಷಿತ ಸಮುದಾಯಕ್ಕೆ ಸೇರಿದ ಮಹಿಳೆಗೆ ಅವಕಾಶ ಸಿಕ್ಕಿದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಶಪ್ಪನವರ ಸುಖಾಸುಮ್ಮನೆ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಇಂಥ ದಬ್ಬಾಳಿಕೆ ರಾಜಕಾರಣ ಸಹಿಸುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2015-16ನೇ ಸಾಲಿನಲ್ಲಿಕಾಶಪ್ಪನವರ ಹಾಗೂ ಅವರ ಸಹೋದರನಗರಸಭೆ ಅಧ್ಯಕ್ಷರಾಗಿದ್ದ ದೇವಾನಂದ ಕಾಶಪ್ಪನವರಬಡವರಿಗೆ ಮನೆ ಕೊಡುವುದಾಗಿ ಹೇಳಿ ತಲಾ ₹30 ಸಾವಿರ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ನಮ್ಮವರು ದೂರು ನೀಡಿದ್ದಾರೆ ಎಂದರು.
ಶೋಭಾ ಅಧ್ಯಕ್ಷರಾದ ಬಳಿಕ, ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಹಂಚಿಕೆ ಮಾಡಲು ಮುಂದಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಶಪ್ಪನವರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೂಡಲೇ ನಡವಳಿಕೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಕನಕಮೂರ್ತೀ ಚಲವಾದಿ, ದಿಶಾ ಸಮಿತಿ ಸದಸ್ಯ ಗಣೇಶ ಹೊರತಟ್ನಾಳ, ಸುಭಾಷ್ ಮದಕಟ್ಟಿ, ಗವಿಸಿದ್ದಪ್ಪ ಗಿಣಿಗೇರಿ, ಲಿಂಗರಾಜ ಕಟ್ಟಿಮನಿ ಹಾಗೂ ಶಶಿಧರ್ ಪೂಜಾರ ಇದ್ದರು.