ಕನಕಗಿರಿ: ‘ಭತ್ತದ ಕಣಜ, ಭತ್ತದ ನಾಡು ಎಂದು ಖ್ಯಾತಿ ಗಳಿಸಿರುವ ಈ ಭಾಗದಲ್ಲಿ ಭತ್ತ ಅಭಿವೃದ್ದಿ ಮಂಡಳಿ ಸ್ಥಾಪಿಸಿ ರೈತರಿಗೆ ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಾದ ಅಗತ್ಯವಿದೆ’ ಎಂದು ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಪ್ರತಿಪಾದಿಸಿದರು.
ಕನಕಗಿರಿ ಉತ್ಸವದ ಡಾ. ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ‘ಗಂಗಾವತಿ. ಕನಕಗಿರಿ, ಕಾರಟಗಿ ತಾಲ್ಲೂಕುಗಳ ಅಭಿವೃದ್ದಿ ಅವಲೋಕನ ನಿನ್ನೆ-ಇಂದು-ನಾಳೆ’ ವಿಷಯದ ಕುರಿತು ಮಾತನಾಡಿದ ಅವರು ‘ಕಾಫಿ, ಎಣ್ಣೆ ಬೀಜ, ಏಲಕ್ಕಿ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ಬೆಳೆಯುವ ಕೆಲ ಬೆಳೆಗಳಿಗೆ ಅಭಿವೃದ್ದಿ ಮಂಡಳಿಗಳಿವೆ. ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಭಾಗದಲ್ಲಿ ಭತ್ತವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಆದರೂ ಭತ್ತದ ಸಂಶೋಧನೆ ಕೇಂದ್ರ, ತರಬೇತಿ ಮತ್ತು ಅದರ ಉಪ ಉತ್ಪನ್ನಗಳನ್ನು ಜಾಗೃತಿ ಮೂಡಿಸುವ ಕೆಲಸ ಮಾಡಲು ಮಂಡಳಿಯಿಲ್ಲ’ ಎಂದರು.
‘ಈ ಭಾಗದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಬೇಕು. ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್ ವೇಗವಾಗಿ ಅಭಿವೃದ್ಧಿಯಾಗಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು’ ಎಂದರು. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಪ್ರಾದೇಶಿಕ ಕಚೇರಿಯನ್ನು ಈ ಭಾಗದಲ್ಲಿ ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು
ಅಭಿಪ್ರಾಯಪಟ್ಟರು.
ಹಿರಿಯ ಕೃಷಿ ವಿಜ್ಞಾನಿ ಬದರಿಪ್ರಸಾದ ಮಾತನಾಡಿ ‘ಈ ಭಾಗದ ತರಕಾರಿ, ಕಾಯಿಪಲ್ಲೆ ಬೆಂಗಳೂರು, ಬೆಳಗಾವಿ ಇತರೆ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿವೆ. ಬೇರೆ ರಾಜ್ಯದಲ್ಲಿ ಬೆಳೆಯುವ ಅನೇಕ ತೋಟಗಾರಿಕೆ ಬೆಳೆಗಳನ್ನು ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದ್ದು, ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದರು.
ಚಿಂತಕ ಕೆ. ಚೆನ್ನಬಸಯ್ಯಸ್ವಾಮಿ, ಸಂಶೋಧಕ ಶರಣಬಸಪ್ಪ ಕೋಲ್ಕಾರ್, ಸಾಹಿತಿಗಳಾದ ಪವನಕುಮಾರ, ಇಮಾಮ್ ಸಾಹೇಬ್ ಹಡಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು. ಚಿಂತಕ ದುರ್ಗಾದಾಸ ಯಾದವ್, ಸಂಶೋಧಕರಾದ ನಾರಾಯಣ ಕಂದಗಲ್, ಯಮನೂರಪ್ಪ ವಡಕಿ, ನಾಗೇಶ ಪೂಜಾರ ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕ ಕಿರಣ ಸಿಂಗ್ ಇದ್ದರು. ಮಂಜುನಾಥ ಮಾಗಳದ ಪ್ರಾರ್ಥಿಸಿದರು. ಕೊಟ್ರೇಶ ಎಂ ಸ್ವಾಗತಿಸಿದರು. ಈಶ್ವರ ಹಲಗಿ ಹಾಗೂ ಶಂಶಾದಬೇಗ್ಂ ನಿರೂಪಿಸಿದರು.