ಶಹಾಪುರ: ಸಂಭ್ರಮದ ದೀಪಾವಳಿ; ಖರೀದಿ ಭರಾಟೆ

ಕೊಪ್ಪಳ: ನಗರದಲ್ಲಿ ಬುಧವಾರ ದೀಪಾವಳಿ ಹಬ್ಬದ ಸಿದ್ಧತೆ ಎಲ್ಲಡೆಯೂ ಜೋರಾಗಿತ್ತು. ಗುರುವಾರ ಅಮವಾಸ್ಯೆಯ ಪೂಜೆಗೆ ಮತ್ತು ಶುಕ್ರವಾರದ ಪಾಡ್ಯೆ ಪೂಜೆಗೆ ಜನ ಖರೀದಿಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡುಬಂತು.
ಲಾಕ್ಡೌನ್ನಂತರ ಮಾರುಕ ಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು, ಇಡೀ ದಿನ ಚಟುವಟಿಕೆಯಿಂದ ಕೂಡಿತ್ತು. ಸುಣ್ಣ, ಬಣ್ಣ ಬಳಿದು ಅಂಗಡಿಗಳು ಅಲಂಕಾರಗೊಂಡಿದ್ದರೆ ಬಟ್ಟೆ ಅಂಗಡಿಗಳು, ಪೂಜಾ
ಸಾಮಾಗ್ರಿ ಅಂಗಡಿಗಳು, ಹೂ, ಹಣ್ಣು, ಬಾಳೆ, ಕುಂಬಳ ಕಾಯಿ, ಬಣ್ಣ ಬಣ್ಣದ ರಂಗೋಲಿಗಳ, ಆಕಾಶ ಬುಟ್ಟಿಗಳ. ಸಿಹಿ ಪದಾರ್ಥಗಳ ಅಂಗಡಿಗಳಲ್ಲಿ ಮಾರಾಟ ಜೋರಾಗಿತ್ತು.
ಬಾಳೆ ಕಂದು, ಮಾವಿನ ತಳಿರು, ಕಬ್ಬು, ಬೂದು ಗುಂಬಳಕಾಯಿ ಖರೀದಿ ಭರಾಟೆ ಎಲ್ಲೆಡೆ ಜೋರಾಗಿ ನಡೆದಿದೆ. ಹೂವು, ಹಣ್ಣಿನ ಬೆಲೆ ಸಾಧಾರಣ ಏರಿಕೆಯಾಗಿದೆ. ಅಂಗಡಿ, ವಾಹನಗಳಿಗೆ ಪೂಜೆ ಮಾಡುವವರು ಅಮಮಾಸ್ಯೆಯಂದು ಖರೀದಿ ನಡೆಸಲಿದ್ದಾರೆ.
ನಗರದ ಪ್ರಮುಖ ರಸ್ತೆಗಳ ಬದಿ ಪಾದಚಾರಿ ರಸ್ತೆಯಲ್ಲಿ ಬೇರೆ ಊರುಗಳಿಂದ ಬಂದು ಹಣ್ಣು, ಹೂವು ಬೆಳೆಗಾರರು, ಬೀದಿಬದಿ ವ್ಯಾಪಾರಸ್ಥರು ಮಾರಾಟದಲ್ಲಿ ತೊಡಗಿದ್ದರು. ನಗರದ ಕೇಂದ್ರ ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ ರಸ್ತೆ, ಜೆಪಿ ಮಾರುಕಟ್ಟೆ, ಅಶೋಕ ವೃತ್ತ, ಗಂಜ್ ವೃತ್ತ ಸೇರಿದಂತೆ ವಿವಿಧೆಡೆ ಅನೇಕ ಬಗೆಯ ವಸ್ತುಗಳ ಮಾರಾಟ ನಡೆಯಿತು.
ತಾಲ್ಲೂಕು ಕ್ರೀಡಾಂಗಣದಲ್ಲಿ ಹೂವು, ಹಣ್ಣು, ಪಟಾಕಿ ಖರೀದಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸುತ್ತಲಿನ ರೈತರು ಇಲ್ಲಿಯೇ ತಮ್ಮ ಸರಕುಗಳನ್ನು ಇಳಿಸುತ್ತಿರುವುದು ಕಂಡು ಬಂತು. ಚೆಂಡು ಹೂವಿನ ಗಾಢವಾದ ಹಳದಿ, ಕೆಂಪು ಬಣ್ಣ ಮನಸೆಳೆಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದರೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಅಂಗಡಿಯಲ್ಲಿ ಬಣ್ಣ, ಬಣ್ಣದ ಆಕಾಶ ದೀಪಗಳು, ಗೂಡು ದೀಪ, ವಿದ್ಯುತ್ ದೀಪದ ಸರಮಾಲೆ ಖರೀದಿಯಲ್ಲಿ ನಿರತರಾಗಿದ್ದರು.
ಕಿರಿದಾದ ರಸ್ತೆಗಳು: ಅಂಗಡಿಕಾರರು ವಸ್ತುಗಳನ್ನು ರಸ್ತೆಯ ಮೇಲಿಟ್ಟು ಮಾರಾಟ ಮಾಡುತ್ತಿರುವುದರಿಂದ ರಸ್ತೆಗಳು ಕಿರಿದಾಗಿದ್ದು, ವಾಹನಗಳ ಮತ್ತು ಜನರ ಓಡಾಟಕ್ಕೆ ತೊಂದರೆಯಾದರೂ ಹಬ್ಬದ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಅನುಸರಿಸದೇ ವಿಧಿಯಿಲ್ಲ.
ಚೆಂಡು ಹೂ ಮಾರಾಟ ಜೋರು: ದೀಪಾವಳಿ ಹಿನ್ನೆಲೆ ನಗರದಲ್ಲಿ ಚೆಂಡು ಹೂವು ದಾಂಗುಡಿ ಇಟ್ಟಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಚೆಂಡು ಹೂವು ಮಾರಾಟ ಜೋರಾಗಿಯೇ ನಡೆಯಿತು. ಕೆ.ಜಿ. ಹೂವಿಗೆ 60ರಿಂದ 100ರವರೆಗೆ ಬೆಲೆ ಇದೆ. ಪ್ರಗತಿಪರ ರೈತರು, ತೋಟಗಾರಿಕೆ ಇಲಾಖೆ ಸಹಕಾರ, ಮಾರ್ಗದರ್ಶನದಲ್ಲಿ ಹೂವು ಬೆಳೆದ ರೈತರ ಭಿತ್ತಿಚಿತ್ರ, ದರ, ಮೊಬೈಲ್ ಸಂಖ್ಯೆ ಖರೀದಿದಾರರಿಗೆ ನೆರವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.