ಅಳವಂಡಿ: ಗ್ರಾಮದಲ್ಲಿ ಮೂರು ವರ್ಷದ ಮಗು ಸೇರಿ ಒಂಬತ್ತು ಜನರಿಗೆ ನಾಯಿ ಕಚ್ಚಿದೆ. ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಅಕ್ಷಯ ಮ್ಯಾಗೇರಿ, ಬಸಮ್ಮ ನೀಲಣ್ಣನವರ, ಯಕ್ಷ ಪತ್ತಾರ, ಜಿಂಕಪ್ಪ ವಾಲಿಕಾರ, ಬಸವರಾಜ, ಶಂಭು, ವೀರೇಶ, ಶಂಕರಪ್ಪ ಹಾಗೂ ಬೈರಾಪುರದ ಕೋಟೆಪ್ಪ ಮೇಟಿ ಅವರಿಗೆ ಕಚ್ಚಿದ್ದು, ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ.
ನಾಯಿ 9 ಜನರಿಗೆ ಕಚ್ಚಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಾಯಿ ಕಡಿತದಿಂದಾಗಿ ಮಕ್ಕಳನ್ನು ಹೊರಗಡೆ ಕಳಿಸಿಬಾರದು. ಹೊರಗೆ ಬಂದವರು ಎಚ್ಚರದಿಂದ ಇರಬೇಕು ಎಂದು ಸಾರ್ವಜನಿಕರಿಗೆ, ಗ್ರಾಮ ಪಂಚಾಯಿತಿ ವತಿಯಿಂದ ಮನವಿ ಮಾಡಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ನಾಗಪ್ಪ, ಪಿಡಿಒ ಕೊಟ್ರಪ್ಪ ಅಂಗಡಿ ಹಾಗೂ ಗ್ರಾ.ಪಂ ಸದಸ್ಯರು, ಸಿಬ್ಬಂದಿ ಸೇರಿ ನಾಯಿ ಹಿಡಿಯಲು ಕಾರ್ಯಾಚರಣೆ ನಡೆಸಿದರು. ಹಲವು ಮಂದಿಯನ್ನು ಕಚ್ಚಿ ಗಾಯಗೊಳಿಸಿದ್ದರಿಂದ ಕಂಪ್ಲಿ ಗ್ರಾಮದಲ್ಲಿ ನಾಯಿಯನ್ನು ಹಿಡಿಯಲಾಯಿತು. ಗ್ರಾಮಸ್ಥರು ನಾಯಿಯನ್ನು ಹೊಡೆದು ಸಾಯಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಯಿ ಕಡಿತದಿಂದ ಗಾಯಗೊಂಡಿರುವ ಯುವಕ
ನಾಯಿ ತಲೆಯ ಮಾದರಿ ಸಂಗ್ರಹಿಸಿ, ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ನಂತರ ನಾಯಿಗೆ ಹುಚ್ಚು ಹಿಡಿದಿತ್ತೇ ಎಂಬ ಮಾಹಿತಿ ತಿಳಿಯಲಿದೆ ಎಂದು ಪಶುವೈದ್ಯಾಧಿಕಾರಿ ಆನಂದ ವಿ.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.