ಕಾಳಗಿ: ರಾಜ್ಯ ಸರ್ಕಾರದ ಗ್ಯಾರಂಟಿಗಳ ಲಾಭ ಪಡೆಯಲು ತಾಲ್ಲೂಕಿನ ಜನರು ವಿವಿಧ ಆಯಾಮಗಳಲ್ಲಿ ಪ್ರಯತ್ನಿಸುತ್ತಿದ್ದಾರೆ. ಆ ಪೈಕಿ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಮಳೆ ಲೆಕ್ಕಿಸದೆ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಮನೆ ಯಜಮಾನಿಗೆ ಪ್ರತಿತಿಂಗಳು ₹ 2 ಸಾವಿರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಗ್ರಾಹಕರು, ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಇ–ಕೆವೈಸಿ ಮಾಡಿಸಬೇಕೆಂಬ ನಿಯಮವಿದೆ. ಕಳೆದೊಂದು ವಾರದಿಂದ ಜನರು ಬ್ಯಾಂಕ್ ಮುಂದೆ ಸಾಲುಗಟ್ಟುತ್ತಿದ್ದಾರೆ.
ದಿನ ಬೆಳಿಗ್ಗೆ 6 ಗಂಟೆಯಿಂದಲೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್ನೊಂದಿಗೆ ಬ್ಯಾಂಕ್ನ ಮುಂದೆ ಸೇರುತ್ತಿರುವ ವಿವಿಧ ಗ್ರಾಮಗಳ ಜನರು ಸರತಿ ಸಾಲಿಗೆ ಇಟ್ಟಿಗೆ ಗುರುತು ಇಟ್ಟು ನಿಲ್ಲುತ್ತಿದ್ದಾರೆ. ಬ್ಯಾಂಕ್ನವರು ಪ್ರತಿದಿನ ಕೇವಲ 65 ಕೂಪನ್ ನೀಡುತ್ತಿದ್ದು, ಹೆಚ್ಚಿನ ಕೂಪನ್ ನೀಡಬೇಕು ಎಂದು ಜನರ ಒತ್ತಾಯವಾಗಿದೆ.
ಬ್ಯಾಂಕ್ನಲ್ಲಿ ಸಿಬ್ಬಂದಿ ಕೊರತೆಯಿದ್ದು, ಬ್ಯಾಂಕ್ ತೆಗೆಯುವವರೆಗೂ ಕಾಯ್ದು, ಇ–ಕೆವೈಸಿಗೆ ದಾಖಲೆ ನೀಡುತ್ತಿದ್ದಾರೆ. ಮಂಗಳವಾರ ಮಳೆ ಬರುತ್ತಿದ್ದರೂ ಗ್ರಾಹಕರು ಮಳೆಯಲ್ಲೆ ಸಾಲುಗಟ್ಟಿದ್ದರು. ಇ–ಕೆವೈಸಿ ಸಂಬಂಧ ಬ್ಯಾಂಕ್ನಲ್ಲಿ 2 ಕೌಂಟರ್ ತೆರೆಯಲಾಗಿದೆ. ಗ್ರಾಹಕರು, ತಮ್ಮ ಖಾತೆಯಿರುವ ಬೇರೆ ಯಾವ ಬ್ಯಾಂಕ್ನಲ್ಲಾದರು ಇ–ಕೆವೈಸಿ ಮಾಡಿಸಬಹುದು. ಮಳೆ ಬರುತ್ತಿದ್ದರೂ ಜನರಿಂದ ಬ್ಯಾಂಕ್ನಲ್ಲಿ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬ್ಯಾಂಕ್ನ ಉಪವ್ಯವಸ್ಥಾಪಕ ಆನಂದಕುಮಾರ ಮಹಾಗಾಂವ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.