ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ತಾ.ಪಂ. ಸದಸ್ಯನ ಪರಿಸರ ಕಾಳಜಿ

Last Updated 5 ಜೂನ್ 2020, 4:27 IST
ಅಕ್ಷರ ಗಾತ್ರ

ಗಂಗಾವತಿ: ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಮಾತ್ರ ಸಂಬಂಧಿಸಿದಲ್ಲ. ಎಲ್ಲರ ಜವಾಬ್ದಾರಿಯೂ ಇದೆ ಎನ್ನುತ್ತಾ ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸದಸ್ಯ ಮಹ್ಮದ್‌ ರಫೀ ಎಂಬುವವರು ತಮ್ಮದೇ ಆದ ತಂಡವನ್ನು ರಚಿಸಿಕೊಂಡು ಸಸಿಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದಾರೆ.

ತಾಲ್ಲೂಕಿನ ಶ್ರೀರಾಮನಗರದ ನಿವಾಸಿಯಾಗಿರುವ ತಾ.ಪಂ.ಸದಸ್ಯ ಮಹ್ಮದ್‌ ರಫೀ ಎಂಬುವವರು ಕಳೆದ ನಾಲ್ಕು ವರ್ಷಗಳಿಂದ ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸಿ ಸಸಿಗಳ ಆರೈಕೆಯಲ್ಲಿ ತೊಡಗಿದ್ದಾರೆ. 2016 ರಿಂದ ಶುರುವಾದ ಅವರ ಪರಿಸರದ ಕಾಳಜಿಯಿಂದಲೇ ಶ್ರೀರಾಮನಗರದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಸಿಗಳು ಇಂದಿಗೂ ಹಚ್ಚಹಸಿರಿನಿಂದ ಕಂಗೊಳಿಸುವಂತಾಗಿವೆ.

ಮಹ್ಮದ್‌ ರಫೀಯವರು ಸಮಾನ ಮನಸ್ಕರ ಜೊತೆಗೂಡಿ ಕ್ಲೀನ್‌ ಅಂಡ್‌ ಗ್ರೀನ್‌ ಪೋರ್ಸ್‌ ಎಂಬ ಹಸಿರು ಬಳಗ ತಂಡವನ್ನು ರಚಿಸಿಕೊಂಡರು. ಇದರಲ್ಲಿ ಅಂಗನವಾಡಿ ಶಿಕ್ಷಕಿಯರು, ಶಾಲೆಯ ಶಿಕ್ಷಕರು ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನೊಳಗೊಂಡ ತಂಡವು ಗ್ರಾಮದ ಸುತ್ತಲೂ ಎಲ್ಲೆಲ್ಲಿ ಸಸಿಗಳನ್ನು ನೆಡಲು ಸಾಧ್ಯವೋ ಅಲ್ಲೆಲ್ಲಾ ಹೋಗಿ ಸಸಿಗಳನ್ನು ನೆಡುವ ಕಾಯಕದಲ್ಲಿ ತೊಡಗಿದ್ದಾರೆ.

ಇದಕ್ಕಾಗಿ ವ್ಯಾಟ್ಸಾಪ್‌ ಗ್ರೂಪ್‌ ವೊಂದನ್ನು ರಚಿಸಿಕೊಂಡಿದ್ದು, ಪ್ರತಿ ಭಾನುವಾರ ಸಸಿಗಳನ್ನು ನೆಡುವುದು, ಸ್ವಚ್ಛತೆಯ ಕಾರ್ಯದಲ್ಲಿ ತೊಡಗುವ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.

ಗೆಳೆಯರ ಅಥವಾ ಸಂಬಂಧಿಕರ ಮದುವೆ ಅಥವಾ ಗ್ರಾಮದಲ್ಲಿ ಯಾರದೇ ಜನ್ಮದಿನಾಚರಣೆ ಮಾಡಿದರೂ ಅವರಿಗೆ ಸಸಿಗಳನ್ನು ವಿತರಣೆ ಮಾಡುವ ಪರಿಪಾಠ ಬೆಳಸಿಕೊಂಡಿದ್ದಾರೆ.

ಶಾಲೆ-ಕಾಲೇಜು, ಸಾರ್ವಜನಿಕರ ರಸ್ತೆ, ಮೈದಾನ, ಆಸ್ಪತ್ರೆ, ಪಾರ್ಕ್‌, ರುದ್ರಭೂಮಿಗಳಲ್ಲಿ ಅರಳಿ, ಆಲದ ಮರ, ಹೆಬ್ಬೇವು. ಹೊಂಗೆ, ನೇರಳೆ, ಹುಣಸೆ, ಸೀತಾಫಲ, ಬೇವು, ಮಹಾಗನಿ ಸೇರಿದಂತೆ ಇತರ ತಳಿಯ ಸಸಿಗಳನ್ನು ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯಿಂದ ತಂದು ನೆಟ್ಟು ಪೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT