ಮಸಬಹಂಚಿನಾಳ (ಕುಕನೂರು): ‘ಮನುಷ್ಯ ಸಂಕುಲದ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಅರಣ್ಯ ಮತ್ತು ಕೃಷಿ ಕರಳು ಬಳ್ಳಿಯ ಸಂಬಂಧ ಹೊಂದಿವೆ. ಸಸಿ ನೆಟ್ಟರೆ ಸಾಲದು, ಅದನ್ನು ಬೆಳೆಸುವ ಮನಸ್ಸುಬೇಕು’ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಗೌರಮ್ಮ ಬಸಪ್ಪ ಆಚಾರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಕಟ್ಟಡ, ರಸ್ತೆ ನಿರ್ಮಾಣದ ನೆಪದಲ್ಲಿ ಮರಗಳ ಮಾರಣಹೋಮ ನಡೆಸುತ್ತಿರುವುದು ಸರಿಯಲ್ಲ. ಮರಗಳನ್ನು ಬೆಳೆಸುವುದರಿಂದ ಮಳೆ, ಶುದ್ಧ ಗಾಳಿ, ನೆರಳಿನ ಆಸರೆ ದೊರೆಯುತ್ತದೆ. ಅಲ್ಲದೆ ಬಿಸಿಲಿನ ಪ್ರಖರತೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ, ಸದಸ್ಯ ಹನುಮಂತ ಬನ್ನಿಕೊಪ್ಪ, ಲಕ್ಷ್ಮಣ ಪೂಜಾರ್, ಬಸವರಾಜ ಪೂಜಾರ್, ಸುರೇಶ, ವಿಶ್ವನಾಥ ಹಾಗೂ ಸಿಬ್ಬಂದಿ ಸಿದ್ಧಲಿಂಗಯ್ಯ ಸಾಲಿಮಠ ಇದ್ದರು.