ಕನಕಗಿರಿ: ಸಮೀಪದ ಕರಡಿಗುಡ್ಡದ ಹನುಮಪ್ಪ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ನಿಮಿತ್ತ ಗುರುವಾರ ಕನಕದಾಸ ಪೂಜಾರ ಅವರ ಮನೆಯಿಂದ ಕರಡಿಗುಡ್ಡದವರೆಗೆ ಪಲ್ಲಕ್ಕಿ ಮೆರವಣಿಗೆ ನೆರವೇರಿತು. ರಾತ್ರಿ ಪೂಜೆ, ಕಾರ್ತಿಕೋತ್ಸವ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಬೆಳಿಗ್ಗೆ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ನೈವೇದ್ಯ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ, ಭಕ್ತಿಯಿಂದ ನಡೆದವು. ಅನ್ನ ಸಂತರ್ಪಣೆ ಮಾಡಲಾಗಿತ್ತು. ಮುಂಗೈ ಆಟ ಸಹ ನಡೆಯಿತು. ಚಿಕ್ಕ ಮಾದಿನಾಳ ಗ್ರಾಮದ ಭಕ್ತರು ಕರಡಿ ಗುಡ್ಡದ ವರೆಗೆ ರಥೋತ್ಸವಕ್ಕೆ ತಾಳ, ಮೇಳ, ಡೊಳ್ಳು ಕುಣಿತದ ಮೂಲಕ ಕಳಸ ತಂದರು.
ಸಂಜೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ಉತ್ತುತ್ತಿ, ಬಾಳೇ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗದಗ, ಬಳ್ಳಾರಿ, ಕೊಪ್ಪಳ, ಕನಕಗಿರಿ, ಗಂಗಾವತಿ ಚಿಕ್ಕಮಾದಿನಾಳ, ನಾಗಲಾಪುರ, ಬಂಕಾಪುರ, ಹಿರೇ ಮಾದಿನಾಳ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ರಥೋತ್ಸವ ಮುಗಿದಾಗ ನವ ವಧು–ವರರು ಪರಸ್ಪರ ಕೈ ಹಿಡಿದುಕೊಂಡು ಸಾಮಗ್ರಿಗಳನ್ನು ಖರೀದಿಸಿದರು. ಗೆಳೆಯರು, ಸಮಾನ ಮನಸ್ಕರು ಮಂಡಾಳು, ಮಿರ್ಚಿ, ಸಿಹಿ ಖಾದ್ಯ ಖರೀದಿಸಿ ಗುಂಪಾಗಿ ಕುಳಿತು ಸವೆದರು.
ರಾತ್ರಿ ಪ್ರಾಣ ದೇವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕನಕಾಚಲಪತಿ ದೇವಸ್ಥಾನದಲ್ಲಿ ಮಂಗಳಾರುತಿ ಮಾಡಿಸಲಾಯಿತು. ಪೂಜಾರ ಮನೆವರೆಗೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.