ಗಂಗಾವತಿ: ನಗರದ 28ನೇ ವಾರ್ಡ್ನ ಶಿಕ್ಷಕರ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿದ ಸರ್ವಪಲ್ಲಿ ರಾಧಾಕೃಷ್ಣ ಉದ್ಯಾನ ಗಮನ ಸೆಳೆಯುತ್ತಿದೆ.
ಉತ್ತಮ ನಿರ್ವಹಣೆಯ ಕಾರಣಕ್ಕೆ ಚಿಣ್ಣರು, ಯುವಕರು, ಮಹಿಳೆಯರು ಹಾಗೂ ವೃದ್ಧರನ್ನು ಆಕರ್ಷಿಸುತ್ತಿದೆ.
ಇದನ್ನು 2019-20ನೇ ಸಾಲಿನ ನಗರಸಭೆಯ ಅಮೃತ ನಗರ ಯೋಜನೆಯಡಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ನಗರದಲ್ಲಿ 14 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಮಾತ್ರ ಸುಸ್ಥಿತಿಯಲ್ಲಿದೆ.
ಈ ಉದ್ಯಾನ ಬೆಳಿಗ್ಗೆ 6 ರಿಂದ 9, ಸಂಜೆ 5 ರಿಂದ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿ ಬಂದು ಆಟವಾಡಿ ಖುಷಿಪಡುತ್ತಾರೆ.
ಯೋಗ ಕೇಂದ್ರ, ಆಸನದ ವ್ಯವಸ್ಥೆ: ಇಲ್ಲಿ ಯೋಗ ಕೇಂದ್ರ ತೆರೆಯಲಾಗಿದೆ. ವೃದ್ಧರು, ನಿವಾಸಿಗಳು ಯೋಗ ಮಾಡುತ್ತಾರೆ.
ಇಲ್ಲಿ 6 ಆಸನಗಳನ್ನು ಅಳವಡಿಸಲಾಗಿದೆ.
ಉದ್ಯಾನದ ಸುತ್ತ 12 ವಿದ್ಯುತ್ ಕಂಬಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಶೌಚಾಲಯ ನಿರ್ಮಿಸಲಾಗಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಉದ್ಯಾನದ ನಿರ್ವಹಣೆಗೆ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ.