ಕೊಪ್ಪಳ: ವರ್ಷದ ಹಿಂದೆ ಕಟ್ಟಡ ನಿರ್ಮಾಣಕ್ಕೆ ತೆಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಬಾಲಕಿ ಮೃತಪಟ್ಟಿರುವ ಸುದ್ದಿ ಬುಧವಾರ ಬೆಳಕಿಗೆ ಬಂದಿದೆ.
ನಗರದ ನಿವಾಸಿ ಭೂಮಿಕಾ ಶಂಭುಲಿಂಗಯ್ಯ ಸಾಲಿಮಠ (15) ಮೃತರು. ನಗರದ ಕೆಎಸ್ ಆಸ್ಪತ್ರೆಯ ಮುಂಭಾಗದಲ್ಲಿನ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಆಳವಾದ ಗುಂಡಿ ತೋಡಲಾಗಿತ್ತು. ಮಂಗಳವಾರ ರಾತ್ರಿಯೇ ಆಕೆ ಗುಂಡಿಯೊಳಗೆ ಬಿದ್ದು ಮೃತಪಟ್ಟಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕಿನ ಮೈನಳ್ಳಿ ಗ್ರಾಮದ ಭೂಮಿಕಾ ತಂದೆ ಶಂಭುಲಿಂಗಯ್ಯ ಉಪಜೀವನಕ್ಕಾಗಿ ಹೊಸಪೇಟೆ ರಸ್ತೆಯ ನಾರಾಯಣ ನಿರಂಜನ್ ಎಂಬುವರ ಜಾಗದಲ್ಲಿ ಪಾನ್ ಶಾಪ್ ಹೊಂದಿದ್ದಾರೆ.
‘ಜಿಲ್ಲಾಡಳಿತ ಮತ್ತು ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ, ಭೂಮಿಕಾ ಸಾವು ಕುರಿತು ತನಿಖೆ ನಡೆಸಬೇಕು’ಎಂದು ಮೃತಳ ಸಂಬಂಧಿ ಮಂಜು ಸಾಲಿಮಠ ಒತ್ತಾಯಿಸಿದ್ದಾರೆ.