ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ಕ್ರಮಕ್ಕೆ ಹಿಂದೇಟು

Published 1 ಫೆಬ್ರುವರಿ 2024, 5:36 IST
Last Updated 1 ಫೆಬ್ರುವರಿ 2024, 5:36 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಶಾಖಾಪುರ ರಸ್ತೆಯಲ್ಲಿ ಅಭಿವೃದ್ಧಿ ಕಾಣದ ನಿರ್ಮಾಣ ಹಂತದಲ್ಲಿರುವ ದ್ಯಾಮಣ್ಣ ಕಟ್ಟಿಹೊಲ ಎಂಬುವವರ ವಸತಿ ವಿನ್ಯಾಸದ ಎಲ್ಲ ನಿವೇಶನಗಳ ದಾಖಲೆಗಳ ಬಿಡುಗಡೆಗೆ ಪುರಸಭೆ ಮುಖ್ಯಾಧಿಕಾರಿ ಆದೇಶ ನೀಡಿದ ಮತ್ತು ಉದ್ಯಾನಕ್ಕೆ ಮೀಸಲಿರಿಸಿದ ಸರ್ಕಾರಿ ಜಾಗದಲ್ಲಿ ಬೃಹತ್‌ ಗುಂಡಿ ತೋಡಿದ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಮುಂದಾಗದಿರುವುದು ಕಂಡುಬಂದಿದೆ.

ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಕೃಷಿಯೇತರ) ಮಾಡಿಸಿಕೊಂಡ ನಂತರ ನಗರಾಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ಆರಂಭಿಕ ಹಂತದಲ್ಲಿ ನಿವೇಶನ ಮಾಲೀಕರಿಗೆ ಶೇ 44 ರಷ್ಟು ನಿವೇಶನಗಳ ಮಾರಾಟಕ್ಕೆ ಮಾತ್ರ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು. ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದ ನಂತರವಷ್ಟೇ ಉಳಿದ ಶೇಕಡ 56ರಷ್ಟು ನಿವೇಶನಗಳ ಆನ್‌ಲೈನ್ ದಾಖಲೆ (ಫಾರ್ಮ್ ನಂ.3)ನ್ನು ಪುರಸಭೆ ಆದೇಶ ನೀಡುವುದು ನಿಯಮ. ಆದರೆ ನಿಯಮ ಪಾಲನೆ ಮಾಡದ ವಿನ್ಯಾಸ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿ ಶೇಕಡ 100 ರಷ್ಟು ನಿವೇಶನಗಳ ಆನ್‌ಲೈನ್‌ ದಾಖಲೆಗಳ ಬಿಡುಗಡೆಗೆ ಆದೇಶ ನೀಡಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪವಿದೆ.

ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿಸಿದ ನಕ್ಷೆಯಲ್ಲಿ ಗುರುತಿಸಿರುವಂತೆ ಉದ್ಯಾನಕ್ಕೆ ಮೀಸಲಿರಿಸಿದ ಉದ್ಯಾನ ಜಾಗದಲ್ಲಿಯೇ ಬಹಳಷ್ಟು ಆಳದ ಗುಂಡಿ ತೋಡಿದ ವಿನ್ಯಾಸದ ಮಾಲೀಕರು ಗರಸುಮಣ್ಣು ಗಣಿಗಾರಿಕೆ ನಡೆಸಿದ್ದಾರೆ. ಜಾಗಕ್ಕೆ ಬಂದು ಅಧಿಕಾರಿಗಳು ಪರಿಶೀಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ.   

‘ಗಣಿ ಇಲಾಖೆ ವರದಿ ನೀಡಿಲ್ಲ‘
ಉದ್ಯಾನ ನಿವೇಶನದಲ್ಲಿ ಅಕ್ರಮವಾಗಿ ಗುಂಡಿ ತೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದ ಡಿಯುಡಿಸಿ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಈ ಬಗ್ಗೆ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದು ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ದಿಲೀಪ್‌ಕುಮಾರ ‍‘ಅಭಿವೃದ್ಧಿ ಉದ್ದೇಶಕ್ಕೆ ಗರಸು ಮಣ್ಣು ಅಲ್ಲಿಯೇ ಬಳಕೆ ಮಾಡಿಕೊಂಡಿರುವ ಕಾರಣ ನಿಯಮ ಉಲ್ಲಂಘನೆಯಾಗಿಲ್ಲ’ ಎಂದರು.
ಆದೇಶ ದಿಢೀರ್ ರದ್ದು!
ನಿವೇಶನಗಳ ಆನ್‌ಲೈನ್‌ ದಾಖಲೆ ಬಿಡುಗಡೆಗೆ ಆದೇಶ ನೀಡಿದ್ದ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಎರಡೇ ತಿಂಗಳಲ್ಲಿ ತಮ್ಮ ಆದೇಶವನ್ನು ರದ್ದುಪಡಿಸಿರುವ ದಾಖಲೆ ಲಭ್ಯವಾಗಿದೆ. ಸ್ಥಳ ಪರಿಶೀಲಿಸಲಾಗಿದ್ದು ಶೇ 100ರಷ್ಟು ದಾಖಲೆ ಬಿಡುಗಡೆಗೆ ಆದೇಶಿಸಲಾಗಿದೆ ಎಂಬುದು ಮುಖ್ಯಾಧಿಕಾರಿ ನೀಡಿದ ಮೊದಲ ಆದೇಶದಲ್ಲಿದೆ. ಆದರೆ ವಸತಿ ವಿನ್ಯಾಸದಲ್ಲಿ ಸ್ಥಾನಿಕ ಪರಿಶೀಲನೆ ನಡೆಸಲಾಗಿದ್ದು ಅಭಿವೃದ್ಧಿ ಕಾಮಗಾರಿ ನಿರ್ವಹಿಸದ ಕಾರಣ ನಿವೇಶನ ಮಂಜೂರಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT