ತಾವರಗೇರಾ : ಸಮೀಪದ ಹಿರೇಮನ್ನಾಪೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಎಸ್ಡಿಎಂಸಿ ಸದಸ್ಯರು ವಿವಿಧ ಬಣ್ಣ ಹಚ್ಚಿ ಕೊಠಡಿಗಳನ್ನು ಶೃಂಗಾರಗೊಳಿಸಿದ್ದು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕರವೇ (ನಾರಾಯಣಗೌಡ ಬಣ) ಹೋಬಳಿಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ ಮಾತನಾಡಿ, ನಮ್ಮ ಗ್ರಾಮದ ಸರ್ಕಾರಿ ಶಾಲೆ ಮಾದರಿ ಶಾಲೆ, ಶಿಕ್ಷಣ ಜೊತೆಗೆ ಸ್ವಚ್ಛತೆ, ಶುದ್ಧ ಪರಿಸರ, ಅಚ್ಚುಕಟ್ಟು ವಾತಾವರಣದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ನಾವು ಎಸ್ಡಿಎಂಸಿ ಸಹಕಾರದಿಂದ ಕಳೆದ 2 ದಿನಗಳಿಂದ ಹಗಲು , ರಾತ್ರಿ ಕೊಠಡಿಗಳಿಗೆ ಬಣ್ಣ ಹಚ್ಚಿದ್ದೇವೆ. ಗೋಡೆಗಳಿಗೆ ಬರಹಗಳು, ಕವಿಗಳ ಹೆಸರು, ಸಾಮಾನ್ಯ ಜ್ಞಾನದ ವಾಕ್ಯಗಳನ್ನು ಬರೆಯಲಾಗಿದೆ. ಸ್ವಂತ ಹಣ, ಕಾರ್ಯಕರ್ತರ ಧನ ಸಹಾಯದಿಂದ ಬಣ್ಣಹಚ್ಚುವ ಮೂಲಕ ತರಗತಿಗಳು ಸ್ವಚ್ಛವಾಗಿ ಕಾಣುವಂತೆ ಮಾಡುತ್ತಿವೆ ಎಂದರು
ಶಿಕ್ಷಣ ಇಲಾಖೆ ಅಧಿಕಾರಿಗಳು,ಸ್ಥಳೀಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಸಿಬ್ಬಂದಿ ಇಂತಹ ಅವಕಾಶ ನೀಡಿದ್ದು, ಮಕ್ಕಳಿಗೆ ಪಠ್ಯದ ಬೋಧನೆ ಜೊತೆಗೆ ಶುದ್ಧ ವಾತಾವರಣ ಸೃಷ್ಟಿಯಾಗಬೇಕಿದೆ. ಆದ್ದರಿಂದ ಇಲ್ಲಿಯ 8 ಕೊಠಡಿಗಳನ್ನು ನಾವು ಬಣ್ಣ ಸ್ವಚ್ಚಗೊಳಿಸಿ ಬಣ್ಣ ಹಚ್ಚಿದ್ದೇವೆ ಎಂದು ಕರವೇ ಕಾರ್ಯಕರ್ತರು ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ತಾವರಗೇರಾ, ಕರವೇ ಹೋಬಳಿ ಘಟಕದ ಉಪಾಧ್ಯಕ್ಷ ಮರಿಯಪ್ಪ, ಕಾರ್ಯದರ್ಶಿ ಶರಣಪ್ಪ ನಿಡಗುಂದಿ, ಪ್ರವೀಣ ಭೋವಿ, ಬಸವರಾಜ ತಾವರಗೇರಾ, ಹನಮೇಶ,ಬಸವರಾಜ, ಯಮನೂರಪ್ಪ ತಳವಾರ, ವಿರೇಶ ಟೆಂಗುಂಟಿ, ಬಾಲಾಜಿ ಚೆನ್ನದಾಸರ, ಸಿದ್ದಪ್ಪ ಭೋವಿ ಮತ್ತು ಕರವೇ ಕಾರ್ಯಕರ್ತರು ಇದ್ದರು.
ಗ್ರಾಮದ ಸರ್ಕಾರಿ ಶಾಲೆಗೆ ಸಮುದಾಯ ಇಷ್ಟೊಂದು ಶ್ರಮಿಸುತ್ತಿರುವದು ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ.
ವಿಜಯಲಕ್ಷ್ಮೀ ಹಿರೇಮಠ., ಸ.ಮಾ. ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಹಿರೇಮನ್ನಾಪೂರ
ತಾವರಗೇರಾ ಸಮೀಪದ ಹಿರೇ ಮನ್ನಾಪೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಕರವೇ ಕಾರ್ಯಕರ್ತರು ಬಣ್ಣ ಹಚ್ಚಿದರು