ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ ಕೊಪ್ಪಳದ ಕಪ್ಪಲೆಪ್ಪ ಜಲಪಾತ

Last Updated 11 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹನುಮಸಾಗರ: ಬಾನಿನಲ್ಲಿ ಒಂದಕ್ಕೊಂದು ಪೋಣಿಸಿಕೊಂಡ ಮೇಘಗಳ ಮಧ್ಯೆ ಅಪರೂಪವೆನಿಸುವ ನೇಸರ ಕಿರಣಗಳು, ತುಂತುರು ಮಳೆ, ಮಲೆನಾಡ ನೆನೆಪಿಸುವಂತೆ ಮೈಗೆ ಮುದ ನೀಡುವ ತಂಗಾಳಿ, ಕಣ್ಣು ಹಾಯಿಸಿದಷ್ಟು ಹಸಿರು ಉಟ್ಟ ಭೂರಮೆ..

ಇಂಥ ಉಲ್ಲಾಸದಾಯಕ ವಾತಾವರಣ ಬಿಸಿಲು ನಾಡಾಗಿರುವ ಕೊಪ್ಪಳ ಜಿಲ್ಲೆ ಕಬ್ಬರಗಿ ಅರಣ್ಯದ ಕಪ್ಪಲೆಪ್ಪ ಜಲಪಾತ ಸುತ್ತಮುತ್ತ ಸದ್ಯ ಕಾಣಸಿಗುತ್ತದೆ.

ಮುಂಗಾರು ಸಮಯದಲ್ಲಿ ಮುನಿಸಿಕೊಂಡಿದ್ದ ಮಳೆರಾಯ ಮೂರು ದಿನಗಳಿಂದ ಬಿಡುವು ನೀಡದೆ ಸುರಿಯುತ್ತಿರುವುದರಿಂದ ಕಪ್ಪಲೆಪ್ಪ ಜಲಪಾತಕ್ಕೆ ಜೀವ ಕಳೆ ತುಂಬಿ ಬರುತ್ತಿದೆ. ಕೊಪ್ಪಳ ಸೇರಿದಂತೆ ವಿಜಯಪುರ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳ ಜನರು ಜಲಪಾತದ ಸೌಂದರ್ಯ ಕಣ್ಣು ತುಂಬಿಕೊಳ್ಳಲು ಬರುತ್ತಿದ್ದಾರೆ. ಈ ಭಾಗದಲ್ಲಿ ಜಲಪಾತಗಳ ಸಂಖ್ಯೆ ಕಡಿಮೆ. ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಈ ಜಲಪಾತಕ್ಕೆ ಹೆಸರಿದೆ.

ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಕಸುವು ಹೊಂದಿದ ಯುವಕರು ಈ ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಬಹುದು. ಜಲಪಾತದ ನೀರು ಗುಪ್ತಗಾಮಿನಿಯಂತೆ ಹರಿದು ಕೆರೆ ಸೇರುತ್ತದೆ. ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿದು ಬರುವ ನೀರು ಸುಮಾರು 25 ಅಡಿ ಎತ್ತರದಿಂದ ಬೀಳುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆ ಸೃಷ್ಟಿ ಮಾಡಿರುತ್ತದೆ. ಬಂಡೆಗೆ ಅಪ್ಪಳಿಸಿದ ನೀರು ಹನಿ ಹನಿಯಾಗಿ ಮೇಲಕ್ಕೆ ಚಿಮ್ಮುವ ದೃಶ್ಯ ಮನಮೋಹಕ.

ಭೋರ್ಗರೆವ ನೀರಿನ ಸದ್ದು ಹೊಸದಾಗಿ ಬಂದವರಿಗೆ ಮಾರ್ಗ ತೋರಿಸುತ್ತದೆ. ಸಮೀಪಿಸುವಾಗ ಹಾಲಿನ ನೊರೆಯಂತೆ ಜಲಪಾತದಿಂದ ಹರಿಯುವ ನೀರಿನ ತಂಪು ಸಂತಸ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಜಿಲ್ಲೆಯ ಮುಖ್ಯ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT