ಕೊಪ್ಪಳ: ಕೇಂದ್ರ ಸರ್ಕಾರದ ಕೋವಿಡ್ ಅನ್ಲಾಕ್ 5.0 ಆರಂಭವಾಗಿದ್ದು, ಚಿತ್ರಮಂದಿರ ಆರಂಭಕ್ಕೆ ಅನುಮತಿ ನೀಡಿದೆ. ನಾವು ಅಗತ್ಯ ಸಿದ್ಧತೆಗಳೊಂದಿಗೆ ಚಿತ್ರಮಂದಿರ ಆರಂಭಿಸುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ, ಚಿತ್ರಮಂದಿರ ಮಾಲೀಕ ವಿರೇಶ ಮಹಾಂತಯ್ಯನಮಠ ತಿಳಿಸಿದರು.
ಸರ್ಕಾರದ ಮಾರ್ಗದರ್ಶಿ ಸೂತ್ರಗಳಂತೆ ನಾವು ಚಿತ್ರಮಂದಿರಗಳನ್ನು ಪ್ರತಿದಿನ ಸ್ವಚ್ಛಗೊಳಿಸಿದ್ದೇವೆ. ಹಾಗೆಯೇ ಬಿಟ್ಟರೆ ಇನ್ನಷ್ಟು ಕೆಟ್ಟು ಹೋಗುತ್ತವೆ. ವಿಶೇಷವಾಗಿ ಸ್ಯಾನಿಟೈಜೇಷನ್ ಕೂಡಾ ಮಾಡಲಾಗಿದೆ. ಆದರೆ ಹೊಸ ಚಿತ್ರಗಳನ್ನು ನಿರ್ಮಾಪಕರು ಮತ್ತು ವಿತರಕರು ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿಲ್ಲ. ಹೀಗಾಗಿ ಹಳೆಯ ಸಿನಿಮಾಗಳನ್ನೇ ಮರು ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಲಕ್ಷ್ಮಿ, ಶಿವಾ ಚಿತ್ರಮಂದಿರ ಸೇರಿದಂತೆ ಜಿಲ್ಲೆಯ 20 ಸಿನಿಮಾ ಮಂದಿರಗಳ ಆರಂಭಕ್ಕೆ ಚರ್ಚೆ ನಡೆದಿದೆ. ವಾಣಿಜ್ಯ ಮಂಡಳಿ ಕೂಡಾ ನಮಗೆ ನೇರವಾಗಿ ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಕಳುಹಿಸಿಕೊಟ್ಟಿದ್ದು, ಜಿಲ್ಲಾಡಳಿತದ ಅನುಮತಿ ಏನೂ ಅವಶ್ಯಕವಿಲ್ಲ. ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ ಎಂದು ಹೇಳಿದರು.