ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಾಯತ ನಾಯಕತ್ವ ತುಳಿದದ್ದು ನಾನಲ್ಲ: ಬಯ್ಯಾಪುರ

Published 5 ಜೂನ್ 2024, 16:10 IST
Last Updated 5 ಜೂನ್ 2024, 16:10 IST
ಅಕ್ಷರ ಗಾತ್ರ

ಕುಷ್ಟಗಿ: ಈ ಕ್ಷೇತ್ರದಲ್ಲಿ ಲಿಂಗಾಯತ ನಾಯಕತ್ವವನ್ನು ತುಳಿಯಲು ಹೊರಟಿರುವವನು ನಾನಲ್ಲ. ಲಿಂಗಾಯತ ನಾಯಕತ್ವವನ್ನು ತುಳಿಯಲು ಹೊರಟವರು ಯಾರು ಎಂಬುದನ್ನು ಶೀಘ್ರದಲ್ಲಿ ವಿವರಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.

ಲಿಂಗಾಯತ ನಾಯಕತ್ವ ಬೆಳೆಯದಂತೆ ಅಮರೇಗೌಡ ಬಯ್ಯಾಪುರ ಅವರು ನೋಡಿಕೊಳ್ಳುತ್ತಿದ್ದಾರೆ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಕ್ಕೆ ಬುಧವಾರ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಬಯ್ಯಾಪುರ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿರುವ ನಾನೇನಾದರೂ ಬಿಜೆಪಿಯನ್ನು ಬೆಂಬಲಿಸಿದ್ದೇನೆಯೇ ಅಥವಾ ಶಾಸಕ ದೊಡ್ಡನಗೌಡ ಅವರೇ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆಯೊ ಎಂಬುದರ ಬಗ್ಗೆ ಮತಗಟ್ಟೆವಾರು ಅಂಕಿಸಂಖ್ಯೆ ಸಹಿತ ಲಿಖಿತ ದಾಖಲೆಯನ್ನೇ ಬಿಡುಗಡೆ ಮಾಡಲಾಗುವುದು ಎಂದು ತಿರುಗೇಟು ನೀಡಿದರು.

ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಕೊಪ್ಪಳ ಕ್ಷೇತ್ರ ಸೇರಿ ದೇಶದೆಲ್ಲೆಡೆ ಕಾಂಗ್ರೆಸ್‌ ತನ್ನ ಶಕ್ತಿಯನ್ನು ಗಮನಾರ್ಹ ರೀತಿಯಲ್ಲಿ ಹೆಚ್ಚಿಸಿಕೊಂಡಿದೆ.  ಬಿಜೆಪಿ ಅಭ್ಯರ್ಥಿ ಸ್ಥಳೀಯರಾಗಿರುವ ಕಾರಣ 5 ಸಾವಿರ ಮತಗಳು ಹೆಚ್ಚಿಗೆ ಬರಬಹುದು ಎಂದು ನಿರೀಕ್ಷೆ ಇತ್ತು. ಆದರೆ ಕೇವಲ 1850 ಮತಗಳು ಮಾತ್ರ ಹೆಚ್ಚಿಗೆ ಬಂದವು. ಹಿಂದಿನ ಮೂರೂ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಹೆಚ್ಚಿನ ಮತ ಪಡೆದಿತ್ತು. ಆದರೆ ಈಗ ಸಂಗಣ್ಣ ಕರಡಿ ಸೇರಿದ ನಂತರ ಕಾಂಗ್ರೆಸ್‌ ಅಭ್ಯರ್ಥಿಗೆ 6000 ಮತಗಳು ಹೆಚ್ಚಿಗೆ ಬಂದಿದ್ದು ಅದು ಕಾಂಗ್ರೆಸ್‌ ಪಾಲಿಗೆ ದೊಡ್ಡ ಮೊತ್ತವೇ ಹೌದು ಎಂದು ಸಮರ್ಥಿಸಿಕೊಂಡರು.

ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಸಣ್ಣ ಸಂಗತಿಯಲ್ಲ. ಕಾಂಗ್ರೆಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳೂ ಕೇಳಿಬಂದವು. ಆದರೆ ಕುಟುಂಬ ರಾಜಕಾರಣದಲ್ಲೇ ಜನ ಮನ್ನಣೆ ದೊರಕಿದ್ದು, ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನ ಪಡೆದಿದ್ದೇವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT