ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗಿನಜಾವ ಗುಡುಗು ಸಹಿತ ಮಳೆಯಾಗಿದೆ.
ಸಿಡಿಲು ಬಡಿದು ವಣಗೇರಿ ಗ್ರಾಮದ ಶಿವಪ್ಪ ಅಗಸಿಮುಂದಿನ ಎಂಬುವ ರೈತರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಮರದ ಕೆಳಗೆ ಕಟ್ಟಿಹಾಕಿದ್ದರಿಂದ ಈ ಅನಾಹುತ ಸಂಭವಿಸಿದೆ.
ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮಧ್ಯರಾತ್ರಿ ನಂತರ ಮಳೆ-ಸಿಡಿಲಿನ ಆರ್ಭಟ ಆರಂಭಗೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ತಾಲ್ಲೂಕಿನ ಆರು ಮಳೆ ಮಾಪನ ಕೇಂದ್ರಗಳ ಪೈಕಿ ಹನುಮನಾಳದಲ್ಲಿ 31.1 ಮಿ.ಮೀ, ಕುಷ್ಟಗಿಯಲ್ಲಿ 13, ಹನುಮಸಾಗರದಲ್ಲಿ 10.2, ಕಿಲಾರಟ್ಟಿ 12.8, ದೋಟಿಹಾಳ 7.2 ಹಾಗೂ ತಾವರಗೇರಾದಲ್ಲಿ 6.2 ಮಿ.ಮೀ ಮಳೆ ಸುರಿದಿರುವುದು ವರದಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.