ಕುಕನೂರು (ಕೊಪ್ಪಳ): ಪಕ್ಷ ಕಟ್ಟಿದವರು ಒಬ್ಬರು, ಅಧಿಕಾರ ಅನುಭವಿಸುತ್ತಿರುವವರು ಇನ್ನೊಬ್ಬರು. ಒಮ್ಮೊಮ್ಮೆ ಹೀಗೂ ಆಗುತ್ತದೆ. ಅವರವರ ಅದೃಷ್ಟಕ್ಕೆ ತಕ್ಕಂತೆ ಅಧಿಕಾರ ಲಭಿಸುತ್ತದೆ. ಇದಕ್ಕೆ ಏನು ಮಾಡಲು ಆಗುವುದಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಮಾರ್ಮಿಕವಾಗಿ ಹೇಳಿದರು.
ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಗೃಹಜ್ಯೋತಿ ಯೋಜನೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು ‘ಬಿಜೆಪಿ ಕಟ್ಟಿದ್ದು ಎಲ್.ಕೆ. ಅಡ್ವಾಣಿ, ಪ್ರಧಾನಿಯಾಗಿದ್ದು ಮಾತ್ರ ನರೇಂದ್ರ ಮೋದಿ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ಸಲ ಮುಖ್ಯಮಂತ್ರಿಯಾದರು. ಹೀಗಾದರೆ ಕಾಂಗ್ರೆಸ್ ಪಕ್ಷದ ಹಳೆಯ ಮಂದಿ ಏನೆಂದುಕೊಳ್ಳಬೇಕು. ಕೆಲವೊಮ್ಮೆ ಅದೃಷ್ಟ ಹಾಗೂ ಸಮಯವೂ ಮುಖ್ಯವಾಗುತ್ತದೆ’ ಎಂದರು.
‘ನನ್ನ ಹಿಂದೆ ಅಡ್ಡಾಡಿದವರು ಈಗ ಜನಪ್ರತಿನಿಧಿಗಳಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಹಾಗೂ ದೇವೇಗೌಡರು ಕಾಲದಲ್ಲಿಯೇ ನಾನು ಸಚಿವನಾಗಿದ್ದೆ. ಆದರೆ, ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಇಬ್ಬರೂ ಮುಖ್ಯಮಂತ್ರಿ ಆಗಿದ್ದರು. ಕುಮಾರಸ್ವಾಮಿ ಮೊದಲೆಲ್ಲ ನನ್ನ ಜೊತೆ ನಿಲ್ಲಲು ಹೆದರಿಕೊಳ್ಳುತ್ತಿದ್ದರು. ಅವರ ಹಣೆಬರಹ ಚೆನ್ನಾಗಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.