ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಗೆ ಸೇರಿದ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಪ್ರಕರಣ ಸುಖಾಂತ್ಯ

ಮಿಯಾಪುರದಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ಶಾಂತಿ ಸಭೆ
Last Updated 21 ಸೆಪ್ಟೆಂಬರ್ 2021, 15:07 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನಮಸಾಗರ ಸಮೀಪದ ಮಿಯಾಪುರದಲ್ಲಿ ಚನ್ನದಾಸರ ಸಮುದಾಯಕ್ಕೆ ಸೇರಿದ ಎರಡು ವರ್ಷದ ಮಗು ಆಟವಾಡುತ್ತಾ ಆಂಜನೇಯ ದೇವಾಲಯ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಪಾಲಕರಿಗೆ ದಂಡ ವಿಧಿಸಿದ್ದ ಘಟನೆ ಸೆ. 4ರಂದು ನಡೆದಿದ್ದು, ಶನಿವಾರ ಶಾಂತಿ ಸಭೆ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಗ್ರಾಮಕ್ಕೆ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ತೆರಳಿ ಶಾಂತಿ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಕುರಿತು ಗ್ರಾಮಸ್ಥರಿಗೆ ಕಠಿಣ ಎಚ್ಚರಿಕೆ ನೀಡಿ, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಸುಖಾಂತ್ಯ ಹಾಡಿದ್ದಾರೆ. ಜಿಲ್ಲೆಯಲ್ಲಿ ಅಸ್ಪಶೃತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಶನಿವಾರ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾ.ಪಂ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಅಸ್ಪೃಶ್ಯತಾ ನಿವಾರಣೆಯ ಜಾಗೃತಿ ಸಭೆ ನಡೆಸಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಗ್ರಾಮದ ಹಿರಿಯರಿಗೆ ಎಚ್ಚರಿಕೆ ನೀಡಿದರು.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಚನ್ನದಾಸರ ಸಮುದಾಯದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ.ಕೆ ಅವರು, ‘ಮಿಯಾಪುರ ಗ್ರಾಮದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ಇದೆ. ಇನ್ನು ಮುಂದೆ ಗ್ರಾಮದ ಚನ್ನದಾಸರ ಸಮುದಾಯದವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ ಸೌಹಾರ್ದ ನಿರಂತರವಾಗಿ ಮುಂದುವರೆಯಲಿ ಎಂಬ ದೃಷ್ಟಿಯಿಂದ ದೂರು ದಾಖಲು ಮಾಡದೆ ಸಭೆ ನಡೆಸಿ, ಇದನ್ನು ಇಲ್ಲಿಗೆ ಕೈಬಿಡಲಾಗಿದೆ. ಇನ್ನು ಮುಂದೆ ಈ ತರಹದ ಘಟನೆಗಳು ನಡೆದರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು‘ ಎಂದು ಸಮುದಾಯದ ಸಂಘಟನೆಯಿಂದ ಪೊಲೀಸರಿಗೆ ಮನವಿ ಪತ್ರ ನೀಡಿದರು.

ಗ್ರಾಮದ ಮುಖಂಡವೀರಪಾಕ್ಷಗೌಡ ಮ್ಯಾಗೇರಿ ಮಾತನಾಡಿ,'ಯಾವುದೊ ಕೆಟ್ಟ ಗಳಿಗೆಯಲ್ಲಿ ಈ ಘಟನೆ ನಡೆದಿದೆ. ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ಗ್ರಾಮದಲ್ಲಿ ಎಲ್ಲಸಮುದಾಯದವರು ಸಹೋದರತ್ವ ಮನೋಭಾವದಿಂದ ಬಾಳುತ್ತೇವೆ' ಎಂಬ ಹೇಳಿಕೆಯ ಪತ್ರ ನೀಡಿದರು.

ಶಾಂತಿಸಭೆಯಲ್ಲಿ ಮಾತನಾಡಿದ ಗಂಗಾವತಿ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ’ಅಸ್ಪೃಶ್ಯತೆ ಸಂಪೂರ್ಣವಾಗಿ ನಾಶವಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ನಾವುಗಳೆಲ್ಲ ಸಂವಿಧಾನದ ಅಡಿಯಲ್ಲಿ ಬಾಳಬೇಕು. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಪೃಶೃತೆ ಆಚರಣೆ ಅಕ್ಷಮ್ಯ ಅಪರಾಧ. ಇನ್ನು ಮುಂದೆ ಗ್ರಾಮದಲ್ಲಿ ಈ ರೀತಿಯ ಚಟುವಟಿಕೆಗಳು ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಎಂ.ಸಿದ್ದೇಶ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್.ಆರ್., ಪಿಎಸ್‍ಐಗಳಾದ ತಿಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಪಿಡಿಒ ವೆಂಕಟೇಶ ನಾಯ್ಕ್ ಮುಂತಾದವರು ಇದ್ದರು.

ಏನಿದು ಪ್ರಕರಣ?

ಗ್ರಾಮದಲ್ಲಿ ಚನ್ನದಾಸರ ಸಮುದಾಯದ ಎರಡು ವರ್ಷದ ಮಗು ಆಕಸ್ಮಿಕವಾಗಿ ದೇವಸ್ಥಾನದ ಒಳಗೆ ಹೋಗಿತ್ತು. ಮಗುವಿನ ತಂದೆ ದೇವಸ್ಥಾನ ಪ್ರವೇಶಿಸಿ ಮಗುವನ್ನು ಹೊರಗೆ ಕರೆದುಕೊಂಡು ಬಂದಿದ್ದರು.

ಇದನ್ನು ನೋಡಿದ ಗ್ರಾಮದ ಕೆಲವರು ಹಾಗೂ ಅರ್ಚಕರು ಸೇರಿ ಸೆ. 12ರಂದು ಸಭೆ ನಡೆಸಿ, ದೇವಸ್ಥಾನ ಮೈಲಿಗೆಯಾಗಿದೆ. ಹೋಮ ಹವನ ಮಾಡಿಸಿ ಸರಿ ಮಾಡಬೇಕು. ಅದಕ್ಕಾಗಿ ₹ 25 ಸಾವಿರ ದಂಡ ಹಾಗೂ ಧಾರ್ಮಿಕ ಕಾರ್ಯಗಳಿಗೆ ಖರ್ಚಾಗುವ ಹಣ ನೀಡುವಂತೆ ಷರತ್ತು ವಿಧಿಸಿದ್ದರು. ಇದನ್ನು ಖಂಡಿಸಿದ ಚನ್ನದಾಸರ ಸಮುದಾಯದವರು ತಮಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಪೊಲೀಸರ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT