ಕುಷ್ಟಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲೆಗಳ ಪದವಿಧರ ಶಿಕ್ಷಕರು ಕಪ್ಪುಪಟ್ಟಿ ಧರಿಸುವ ಮೂಲಕ ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಬರೆದ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮೂಲಕ ಸಲ್ಲಿಸಿದರು.
ಪದವೀಧರ ಶಿಕ್ಷಕರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾ ಅವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗಳಿಗೆ ಒಂದು ಬಾರಿ ವರ್ಗಾವಣೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಮನವಿಯಲ್ಲಿ ಇದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರ ಇತರರು, ಅನೇಕ ದಿನಗಳಿಂದಲೂ ವಿವಿಧ ರೀತಿಯಲ್ಲಿ ಬೇಡಿಕೆ ಮಂಡಿಸುತ್ತ ಬಂದರೂ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ, ಅನಿವಾರ್ಯ ಪರಿಸ್ಥಿತಿಯಲ್ಲಿ ಚಳವಳಿ ನಡೆಸುವುದಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗಿದೆ. ಬೇಡಿಕೆಗಳ ಈಡೇರಿಕೆಗೆ ಕಪ್ಪುಪಟ್ಟಿ ಧರಿಸುವುದರ ಮೂಲಕ ‘ಅಸಹಕಾರ ಚಳವಳಿ’ಯ ಮಧ್ಯೆಯೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈಗಲಾದರೂ ಸರ್ಕಾರ ಕಣ್ತೆರೆಯುವುದೆ ಕಾದು ನೋಡುತ್ತೇವೆ. ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕಳಕಮಲ್ಲೇಶ ಭೋಗಿ, ಸಂಘದ ಪ್ರಮುಖರಾದ ಅಮರೇಗೌಡ ನಾಗೂರು, ನಿಂಗಪ್ಪ ಗುನ್ನಾಳ, ಗುರುಪಾದಮ್ಮ ಭಂಡಾರಿ, ವಿಜಯಕುಮಾರ ಜಾಲಿಹಾಳ, ಮಂಜಪ್ಪ ಪೂಜಾರ, ಅಲ್ತಾಫ್ ಹುಸೇನ್, ರುದ್ರಮ್ಮ, ವಿದ್ಯಾ ಕಂಪಾಪೂರಮಠ, ಗಿರಿಜಾದೇವಿ, ರುದ್ರಪ್ಪಬೂದಿಹಾಳ, ಯಮನಪ್ಪ ಲಮಾಣಿ ಇತರರು ಇದ್ದರು.
‘ಶಿಕ್ಷಕರಿಗೆ ತೊಂದರೆ’
ಹನುಮಸಾಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ವತಿಯಿಂದ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರದ ಹೊಸ ನೀತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ತೊಂದರೆಯಾಗಿದೆ. ಮಾಧ್ಯಮಿಕ ಶಿಕ್ಷಣ ಅಭಿಯಾನದ ಸ್ಪಷ್ಟ ಮಾರ್ಗಸೂಚಿ ರೂಪಿಸದಿರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತೊಂದರೆ ಉಂಟಾಗಿದೆ ಎಂದು ಶಿಕ್ಷಕ ಮಹಿಬೂಬಸಾಬ ಕಂದಗಲ್ ತಿಳಿಸಿದರು.