ಗಂಗಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕಿನ ಚಂದ್ರಬಾಬು ನಾಯ್ಡು ಅಭಿಮಾನಿ ಬಳಗ ಹಾಗೂ ಕಮ್ಮಾ ಯುವ ವೇದಿಕೆ ಸದಸ್ಯರು ನಗರದ ಕೃಷ್ಣದೇವರಾಯ ವೃತ್ತದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶ ಅಭಿವೃದ್ಧಿಗೆ ಕಪ್ಪು ಚುಕ್ಕೆಯಿಲ್ಲದೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಸದ್ಯದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಉದ್ದೇಶ ಪೂರ್ವಕಾಗಿ, ದ್ವೇಷದ ರಾಜಕಾರಣದ ಮೂಲಕ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಿರುವುದು ಖಂಡೀನಿಯ ಎಂದು ಹೇಳಿದರು.
ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಷ್ಟ್ರಮಟ್ಟದ ಪ್ರಭಾವಿ ನಾಯಕ. ಮುಂಬರುವ ಚುನಾವಣೆಯಲ್ಲಿ ಟಿಡಿಪಿ ಅಧಿಕಾರಕ್ಕೆ ಬರುತ್ತದೆ ಎಂಬ ದ್ವೇಷದಿಂದ ಅವರನ್ನು ಬಂಧಿಸುವಂತೆ ಮಾಡಿದ್ದಾರೆ. ಜಗನ್ ಮೋಹನ್ ರೆಡ್ಡಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿದರು.
ಇದಕ್ಕೂ ಮುನ್ನ ಸಾವಿರಾರು ಯುವಕರು, ಅಭಿಮಾನಿಗಳು ಕಾರಟಗಿಯಿಂದ ಬೃಹತ್ ಪ್ರತಿಭಟನೆ ರ್ಯಾಲಿ ಆರಂಭಿಸಿ, ಗಂಗಾವತಿ ನಗರಕ್ಕೆ ಬಂದು ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಮಂಜುನಾಥಗೆ ಮನವಿ ಸಲ್ಲಿಸಿದರು.
ಕಮ್ಮಾ ವೇದಿಕೆ ತಾಲ್ಲೂಕು ಅಧ್ಯಕ್ಷ ಚಿನ್ನುಪಾಟಿ ಪ್ರಭಾಕರ್, ಮುಖಂಡ ಕೆ.ಜಾನಕಿರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ರಾಮಚಂದ್ರ, ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ, ಚಿಲಕೂರಿ ಪ್ರಸಾದ, ಸ್ವರಾಜ್ ವಕೀಲ, ವೆಂಕಟಕೃಷ್ಣ ತಮ್ಮಿನೆನಿ, ಸುಬ್ಬ ರಾವ, ಜಗದೀಶ, ನಾಗರಾಜ, ಟಿ.ರಾಮೃಷ್ಣ(ನಾನಿ) ಎಂ. ಶ್ರೀನಿವಾಸ ಸೇರಿದಂತೆ ಸಾವಿರಾರು ಜನ ಅಭಿಮಾನಿಗಳು, ಕಮ್ಮಾ ಸಮಾಜದ ಮುಖಂಡರು, ಯುವಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.