ಗಂಗಾವತಿ: ನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಎಚ್.ಜಿ.ರಾಮುಲು ಮನೆಯಿಂದ ಸಾಯಿಬಾಬಾ ದೇವಸ್ಥಾನದವರೆಗೂ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘಟನೆಯು ಬುಧವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ ವಿ.ಎಚ್.ಹೊರಪೇಟೆ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ ಮಾತನಾಡಿ, ನಗರದ ಎಚ್.ಜಿ.ರಾಮುಲು ಅವರ ಮನೆಯಿಂದ ಸಾಯಿಬಾಬಾ ದೇವಸ್ಥಾನದವರೆಗೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಈ ರಸ್ತೆಯ ಮೇಲೆ ಇತ್ತಿಚೆಗೆ ಭಾರಿ ವಾಹನಗಳ ಓಡಾಟ ಹೆಚ್ಚಾಗಿ, ರಸ್ತೆಯು ಸಂಪೂರ್ಣ ಹದಗೆಟ್ಟಿದೆ ಎಂದರು.
ರಸ್ತೆ ಕಿರಿದಾಗಿರುವುದರಿಂದ ಅಪಘಾತಗಳು ಹೆಚ್ಚಿವೆ. ರಸ್ತೆಯಲ್ಲಿನ ಧೂಳು ಸಹ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳನ್ನು ಹೈರಾಣಾಗಿಸಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆ ಮೇಲೆ ಓಡಾಡುವ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕು. ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ನಗರದ ಸೇವಾಲಾಲ್ ವೃತ್ತದಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿಲಾಯಿತು. ಪ್ರತಿಭಟನೆಗೆ ಬೇತೆಲ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಿದರು.
ಈ ವೇಳೆ ಸಂಘಟನೆಯ ಪದಾಧಿಕಾರಿಗಳಾದ ಹನುಮಂತ, ಗಾಳೆಪ್ಪ, ಪ್ರಕಾಶ, ರಾಮು, ಮಂಜು ನಾಯಕ, ಶಿವಪ್ಪ, ವೆಂಕಟೇಶ್ ಜಾಧವ, ಕೃಷ್ಣ, ರವಿ ಚೌಹಾಣ್, ಸುರೇಶ್ ಇದ್ದರು.